ಶಿಗ್ಗಾವಿ: ‘ಅಕ್ಟೋಬರ್ ತಿಂಗಳಲ್ಲಿನ ಮಳೆ ಹಿಂಗಾರು ಹಂಗಾಮಿಗೆ ಉತ್ತಮ ಭರವಸೆ ಮೂಡಿಸಿದೆ. ಹಿಂಗಾರಿ ಬಿಳಿ ಜೋಳ, ಕಡಲೆ, ಗೋಧಿ, ಕುಸುಬೆ ಬಿತ್ತನೆಗೆ ಈಗ ಸಕಾಲವಾಗಿದೆ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಆರ್.ನಾಗನಗೌಡ ರೆಡ್ಡಿ ಹೇಳಿದ್ದಾರೆ.
ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ‘ತಾಲ್ಲೂಕಿನಲ್ಲಿ ಈಗಾಗಲೇ ಶೇ 58ರಷ್ಟು ಬಿತ್ತನೆಯಾಗಿದೆ. ಬೆಳೆಗಳ ಸಂರಕ್ಷಣೆ ರೈತರು ಗಮನ ಹರಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಬಿತ್ತನೆ ಸಿದ್ಧತೆ: ಬಿತ್ತುವ ಪೂರ್ವದಲ್ಲಿ ಬೀಜೋಪಚಾರ ಮಾಡುವುದು ಕಡ್ಡಾಯ. ಅದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುತ್ತದೆ. ಜೊತೆಗೆ ತೇವಾಂಶ ಕೊರತೆ ಎದುರಿಸುವ ಬರ ನಿರೋಧಕ ಶಕ್ತಿ ಪಡೆಯುತ್ತವೆ ಎಂದಿದ್ದಾರೆ.
ಕೀಟ ನಿಯಂತ್ರಣ: ಹಿಂಗಾರು ಬೆಳೆಗಳಿಗೆ ಲದ್ದಿಹುಳುವಿನ (ಸೈನಿಕಹುಳು) ಬಾಧೆ ಅಂಟಿಕೊಳ್ಳುವ ಆತಂಕವಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಔಷಧೋಪಚಾರ ಹಾಗೂ ಪ್ರತಿ ಎಕರೆಗೆ 5–10 ಬೆಳಕು ಆಕರ್ಷಕ ಬಲೆಗಳನ್ನು(ಲೈಟ್ ಟ್ರ್ಯಾಪ್ಸ್) ಬಳಸಿ ಈ ಲದ್ದಿ ಹುಳುವಿನ ಚಟುವಟಿಕೆ ನಿಯಂತ್ರಿಸಬಹುದು ಎಂದು ಸಲಹೆ ನೀಡಿದ್ದಾರೆ.