ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಆರ್.ಎಂ. ಮಂಜುನಾಥ ಗೌಡ ನಿವಾಸ ಹಾಗೂ ಬ್ಯಾಂಕ್ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದರು.
ತೀರ್ಥಹಳ್ಳಿಯ ಕರಕುಚ್ಚಿ, ಬೆಟ್ಟಮಕ್ಕಿ ಮನೆಗಳು, ಶಿವಮೊಗ್ಗದ ಶರಾವತಿ ನಗರದ ಮನೆ, ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ, ಪ್ರಧಾನ ಶಾಖೆ, ಕೊಡಚಾದ್ರಿ ಪತ್ತಿನ ಸಹಕಾರಿ ಸಂಘದ ಮೇಲೆ ಬೆಳಿಗ್ಗೆ 8ಕ್ಕೆ ದಾಳಿ ನಡೆಸಿದ ಮಂಗಳೂರು ಐಟಿ ಅಧಿಕಾರಿಗಳ ನಾಲ್ಕು ತಂಡ ರಾತ್ರಿಯವರೆಗೂ ಪರಿಶೀಲನೆ ನಡೆಸಿತು.
ಮಂಜುನಾಥಗೌಡ ಅವರು ಸಲ್ಲಿಸಿದ್ದ ಆದಾಯ ತೆರಿಗೆ ದಾಖಲೆಗಳು, ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿ ಸಂಗ್ರಹಿಸಿತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕೆಜೆಪಿ ಟಿಕೆಟ್ನಿಂದ ತೀರ್ಥಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಮಂಜುನಾಥ ಗೌಡ ಸೋತಿದ್ದರು. ಎರಡು ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದಿದ್ದ ₹ 62.77 ಕೋಟಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ಸೇರಿದ್ದರು. ಒಂದು ಅವಧಿಗೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿದ್ದ ಅವರು, ಏಳು ಬಾರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.