ಆನೇಕಲ್: ಎರಡು ಕರಡಿ ಮರಿಗಳನ್ನು ಸಂರಕ್ಷಿಸಿ ಪುನಃ ಕಾಡಿಗೆ ಸೇರಿಕೊಳ್ಳಲು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಎಸ್ಒಎಸ್ ವನ್ಯ ಜೀವಿ ವಿಭಾಗದ ವೈದ್ಯರಾದ ಡಾ.ಅರುಣ್ ಮತ್ತು ತಂಡದವರು ಶ್ರಮಿಸಿದರು.
ತುಮಕೂರು ಜಿಲ್ಲೆಯ ಕುಣಿಗಲ್ ಸಮೀಪದ ವಿಠಲಾಪುರದ ಗುಡ್ಡದಲ್ಲಿ ಕರಡಿ ಮರಿ ಇರುವ ಬಗ್ಗೆ ಮಾಹಿತಿ ದೊರೆಯಿತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕರಡಿ ಮರಿಗೆ ಪ್ರಥಮ ಚಿಕಿತ್ಸೆ ನಡೆಸಿ ಕರಡಿ ಮರಿಯು ತಾಯಿಯೊಂದಿಗೆ ಸೇರಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ಡಾ.ಅರುಣ್ ತಿಳಿಸಿದರು.
ತಾಯಿ ಕರಡಿ ಸುತ್ತಲಿನ ಪ್ರದೇಶದಲ್ಲಿಯೇ ಇರುವ ಬಗ್ಗೆ ಖಾತ್ರಿಯಾಗಿದೆ. ಜನಸಂಚಾರ ಸ್ಥಗಿತಗೊಂಡ ನಂತರ ತಾಯಿ ಜೊತೆ ಅದು ಸೇರಿಕೊಳ್ಳುತ್ತದೆ. ಕರಡಿ ಮರಿಗೆ ಕೇವಲ ಒಂಬತ್ತರಿಂದ 10 ತಿಂಗಳಾಗಿದ್ದು ಅದು ಕಾಡಿನಲ್ಲಿಯೇ ವಾಸಿಸಲು ಅನುವಾಗಲಿ ಎಂದು ಚಿಕಿತ್ಸೆ ನೀಡಿ ಬಿಡಲಾಗಿದೆ ಎಂದರು.
ನವೆಂಬರ್ 6ರಂದು ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಸಮೀಪದ ಗಂಗಾಧರನಗುಡ್ಡೆಯ ಬಳಿ ಮತ್ತೊಂದು ಕರಡಿ ಮರಿ ಇರುವ ಮಾಹಿತಿ ದೊರಕಿತ್ತು. ಅರಣ್ಯಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ತೆರಳಿ ಈ ಕರಡಿ ಮರಿಗೂ ಚಿಕಿತ್ಸೆ ನೀಡಿ ಕಾಡಿಗೆ ಸೇರಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು.