ಧಾರವಾಡ: 'ಡಾ.ಬಿ.ಆರ್. ಅಂಬೇಡ್ಕರ್ ಅವರು ಸಮಾಜದಲ್ಲಿ ಅಕ್ಷರ ವಂಚಿತ ಅಸಂಖ್ಯಾತ ಜನರಲ್ಲಿ ಅಕ್ಷರ ಬೀಜ ಬಿತ್ತಿದ ಮಹಾನ್ ಪುರುಷ' ಎಂದು ದಲಿತ ಮುಖಂಡ ಲಕ್ಷ್ಮಣ ಬಕ್ಕಾಯಿ ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು 1900ರ ನ. 7ರಂದು ಶಾಲೆಗೆ ಪ್ರವೇಶ ಪಡೆದ ಸವಿನೆನಪಿಗಾಗಿ ಇಲ್ಲಿನ ಬುದ್ಧ ರಕ್ಕಿತ ವಸತಿ ಫ್ರೌಡಶಾಲೆಯಲ್ಲಿ ಆಯೋಜಿಸಿದ್ದ ‘ವಿದ್ಯಾರ್ಥಿ ದಿವಸ ಆಚರಣೆ’ ಸಮಾರಂಭದಲ್ಲಿ ಮಾತನಾಡಿದರು.
‘ಅಂಬೇಡ್ಕರ್ ಅವರು ಅಸ್ಪೃಶ್ಯತೆಯ ಕರಾಳ ದಿನಗಳಲ್ಲಿ ಮಡಿವಂತಿಕೆ ಸಮಾಜದ ಹಲವು ನಿರ್ಬಂಧಗಳ ಮಧ್ಯೆಯೂ ಜಗತ್ತೇ ಹುಬ್ಬೇರಿಸುವಂತೆ ಸಾಧನೆಯ ಶಿಖರ ಏರಿದರು. ರಾಜ ಪ್ರಭುತ್ವದ ದೇಶವನ್ನು ಪ್ರಜಾಪ್ರಭುತ್ವದೆಡೆಗೆ ಪರಿವರ್ತಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದರು.
‘ಸಮಾಜದಲ್ಲಿ ಅಕ್ಷರ ವಂಚಿತ ಅಸಂಖ್ಯಾತ ಜನರ ಎದೆಯೊಳಗೆ ಅಕ್ಷರದ ಬೀಜ ಬಿತ್ತಿದರು. ಮಹಾರಾಷ್ಟ್ರ ಸರ್ಕಾರವು ಈ ದಿನವನ್ನು ‘ವಿದ್ಯಾರ್ಥಿ ದಿವಸ’ ಎಂದು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ’ ಎಂದರು.
ಶಿಕ್ಷಣತಜ್ಞ ಎಸ್.ಡಿ. ನೀಲಣ್ಣವರ ಮಾತನಾಡಿ, ‘ಗುರು–ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಗುರುಗಳನ್ನು ಗೌರವದಿಂದ ಕಾಣಬೇಕು. ಶಿಕ್ಷಕರು ಉತ್ತಮ ಸಮಾಜ ಸುಧಾರಣೆಗೆ ಹೆಚ್ಚಿನ ಪ್ರಾಧಾನ್ಯತೆ ಆಧ್ಯತೆ ನೀಡಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ‘ವಿದ್ಯಾರ್ಥಿ ದಿವಸ ಆಚರಣೆಯು ದೇಶದ ಪ್ರತಿಯೊಬ್ಬ ಶೋಷಿತ ವ್ಯಕ್ತಿಗೆ ಅತ್ಯಂತ ಭಾವನಾತ್ಮಕ ಸಂಗತಿಯಾಗಿದೆ’ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್.ಡಿ. ನೀಲಣ್ಣವರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕೆ.ಜಿ. ಆಡೂರ, ಆನಂದ ಮುಶಣ್ಣವರ, ಶಾಲೆ ಮುಖ್ಯ ಶಿಕ್ಷಕ ಎಂ.ಎ. ಹುಂಡೇಕಾರ, ಶಿಕ್ಷಕ ಬಿ.ಕೆ. ಹಲಗಿ ಇದ್ದರು.
ಉತ್ತರ ಕರ್ನಾಟಕ ಛಲವಾದಿ ಮಹಾಸಭಾ ಜಿಲ್ಲಾ ಘಟಕ: ಇಲ್ಲಿನ ಕಲಾಭವನದ ಎದುರಿನ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಉತ್ತರ ಕರ್ನಾಟಕ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಕಾರ್ಯಕರ್ತರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ‘ವಿದ್ಯಾರ್ಥಿ ದಿನ’ ಆಚರಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ನವಲೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಕೊಳ್ಳಪ್ಪನವರ ಇದ್ದರು.