ಮುಂಡರಗಿ: ‘ಸೂಫಿಗಳು, ಶರಣರು ಮತ್ತು ಸಂತರಿಗೆ ಜಾತಿಭೇದ ಇರಲಿಲ್ಲ. ಅವರು ಲೋಕದ ಡೊಂಕನ್ನು ಎತ್ತಿತೋರಿಸುವುದರ ಜೊತೆಗೆ ಅದನ್ನ ತಿದ್ದಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು’ ಎಂದು ಇಲ್ಲಿನ ತೋಂಟದಾರ್ಯ ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.
ಮಠದಲ್ಲಿ ನಡೆದ ಶಿವಾನುಭವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬದುಕಿಗೆ ಜ್ಞಾನದ ಬೆಳಕು ಬೇಕು. ಜ್ಞಾನದ ಬೆಳಕು ಮನುಷ್ಯತ್ವದ ಬೆಳಕಾಗಬೇಕು. ಬದುಕನ್ನು ಹಣದಿಂದ ಅಳೆಯಲಾಗದು ಮತ್ತು ಅದನ್ನು ಹಣದಿಂದ ಅನುಭವಿಸಲಾಗದು. ಮನಸ್ಸು ಕೊಳೆಯುವ ಮುನ್ನ ಬದುಕನ್ನು ಹಸನುಗೊಳಿಸಬೇಕು’ ಎಂದರು.
‘ನಮ್ಮ ಬದುಕು ಬೆಳಕಾಗಬೇಕಾದರೆ ಇಂತಹ ಶಿವಾನುಭವ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಶರಣರ ತತ್ವಾದರ್ಶಗಳು ಜಗತ್ತಿನ ಅಂಧಕಾರ ನಿವಾರಿಸಬಲ್ಲವು’ ಎಂದು ಎ.ಎಸ್.ಮಕಾನದಾರ ಅಭಿಪ್ರಾಯಪಟ್ಟರು.
ಗಣೇಶ ಗೆಣಕಿನಹಾಳ ಧರ್ಮಗ್ರಂಥ ಪಠಿಸಿದರು. ಪವನಕುಮಾರ ಬಂಡಿ ವಚನ ಚಿಂತನೆ ನೆರವೇರಿಸದರು. ಹೊನ್ನವ್ವ ತಿರಕಪ್ಪ ಕೋಗಿಲೆ ಸ್ಮರಣಾರ್ಥ ಯಲ್ಲಪ್ಪ ಕೋಗಿಲೆ ಅವರು ಭಕ್ತಿ ಸೇವೆ ವಹಿಸಿಕೊಂಡಿದ್ದರು. ಗೋಣಿ ರುದ್ರದೇವರು, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಧ್ರುವಕುಮಾರ ಹೊಸಮನಿ ಇದ್ದರು.