ಬಳ್ಳಾರಿ: ‘ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸದಿದ್ದರೆ ಮುಂದಿನ ದಿನಗಳಲ್ಲಿ ಜೀವಸಂಕುಲಕ್ಕೆ ಹೆಚ್ಚು ಅಪಾಯ ಕಾದಿದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೃಷ್ಣಮೂರ್ತಿ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಜವಾಬ್ದಾರಿ ಎನ್ನುವಂತಿಲ್ಲ. ಸಾರ್ವಜನಿಕರೆಲ್ಲರೂ ಪಾಲ್ಗೊಂಡರೆ ಮಾತ್ರ ನಿಯಂತ್ರಣ ಸಾಧ್ಯ’ ಎಂದರು.‘ಶುದ್ಧ ಕುಡಿಯುವ ನೀರು ದುರ್ಲಭವಾಗಿದೆ.
ನೀರಿನ ಬಾಟಲಿಯನ್ನು ಖರೀದಿಸಿದಂತೆ ಗಾಳಿಯನ್ನೂ ಖರೀದಿಸಬೇಕಾದ ದಿನಗಳೂ ಬರಬಹುದ. ಜೀವನಶೈಲಿಯ ಬದಲಾವಣೆಯಿಂದ ಮಾತ್ರ ಇಂಥ ಸನ್ನಿವೇಶಗಳು ಬಾರದಂತೆ ನಿಯಂತ್ರಿಸಬಹುದು’ ಎಂದರು.
‘ಹೆಚ್ಚು ವಾಹನಗಳ ಬಳಕೆ ಮತ್ತು ಮರಗಿಡಗಳ ನಾಶವೇ ವಾಯು ಮಾಲಿನ್ಯದ ಪ್ರಮುಖ ಕಾರಣವಾಗಿದೆ. ಏಕಕಾಲಕ್ಕೆ ವಾಹನಗಳ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಮರಗಿಡಗಳನ್ನು ಪೋಷಿಸುವುದು ತುರ್ತಾಗಿ ಆಗಲೇಬೇಕಾದ ಕೆಲಸ’ ಎಂದು ಪ್ರತಿಪಾದಿಸಿದರು.
ಪ್ರಾದೇಶಿಕ ಸಾರಿಗೆ ಕಚೇರಿಯ ಅಧೀಕ್ಷಕ ಗುಡಿಮನಿ, ‘ಶುದ್ಧ ಗಾಳಿ ಇಲ್ಲದೇ ಕೆಲ ಕ್ಷಣ ಸಹ ಜೀವಿಸುವುದಕ್ಕೂ ಆಗುವುದಿಲ್ಲ’ ಎಂದರು. ನಿವೃತ್ತ ಅಧೀಕ್ಷಕ ಎಸ್.ಕೆ.ಸುರೇಶ್ ಬಾಬು, ಪ್ರಥಮ ದರ್ಜೆ ಸಹಾಯಕರಾದ ಮಂಜುನಾಥ ಮತ್ತು ವೀರೇಶ್ ಪಾಲ್ಗೊಂಡಿದ್ದರು.