ಧಾರವಾಡ: ‘ಜಿಲ್ಲೆಯ ರೈತರ ಪಹಣಿಯಲ್ಲಿ ಕರಾರುವಕ್ಕಾದ ಬೆಳೆ ಮಾಹಿತಿ ಇಲ್ಲದಿರುವುದರಿಂದ ಸರ್ಕಾರ ಬೆಳೆ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಸಹಾಯಧನ ನೀಡಿಕೆ ಮತ್ತಿತರ ಯೋಜನೆಗಳಡಿ ರೈತರು ಪ್ರಯೋಜನ ಪಡೆಯಲು ತೊಂದರೆಯಾಗಿತ್ತು.
ಆದರೆ ಇದನ್ನು ಪರಿಹರಿಸಲು ಸರ್ಕಾರ ಅಭಿವೃದ್ಧಿಪಡಿಸಿದ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸುವಲ್ಲಿ ಮಾಡಿದ ಉತ್ತಮ ಸಾಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ಅವರಿಗೆ ಪ್ರಶಂಸಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.
ರೈತರ ಬೆಳೆಯ ಕರಾರುವಕ್ಕಾದ ಮಾಹಿತಿಯ ಸಂಗ್ರಹಣೆಯ ಜೊತೆಗೆ ಮೊಬೈಲ್, ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಅನುಕೂಲವಾಗುವಂತಹ ಬೆಳೆ ಸಮಿಕ್ಷೆ ಮೊಬೈಲ್ ತಂತ್ರಾಂಶವನ್ನು ಸಿದ್ಧಪಡಿಸಿತ್ತು.
ಇದರ ಮೂಲಕ ಜಿಲ್ಲೆಯಲ್ಲಿ ಶೇ 61ರಷ್ಟು ತಾಕುಗಳಲ್ಲಿ ಬೆಳೆ ಮಾಹಿತಿಯನ್ನು ದಾಖಲಿಸಲಾಗಿದೆ. ಅತಿ ಕಡಿಮೆ ಸಮಯದಲ್ಲಿ ಇಷ್ಟು ಮಾಹಿತಿ ಸಂಗ್ರಹಿಸಿರುವುದು ಸಂತೋಷ ತಂದಿದೆ. ಬಾಕಿ ಉಳಿದಿರುವ ಬೆಳೆ ಸಮೀಕ್ಷೆ ಕಾರ್ಯವನ್ನೂ ಸಹ ಶೀಘ್ರದಲ್ಲಿ ಪೂರ್ಣಗೊಳಿಸುತ್ತೀರಿ ಎಂಬ ಭರವಸೆ ಇದೆ’ ಎಂದು ಪ್ರಶಂಸನಾ ಪತ್ರದಲ್ಲಿ ತಿಳಿಸಿದ್ದಾರೆ.