ಹೆತ್ತೂರು: ಕಾಡಾನೆಗಳ ದಾಳಿಯಿಂದ ಭತ್ತದ ಗದ್ದೆ, ಕಾಫಿ ತೋಟ ಹಾಳಾಗಿರುವ ಘಟನೆ ಹೋಬಳಿಯ ಬಾಚಿಹಳ್ಳಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ. ನೀರಾವರಿ ಉದ್ದೇಶಕ್ಕಾಗಗಿ ಇಟ್ಟಿದ್ದ ಅಲ್ಯೂಮೀನಿಯಂ ಪೈಪ್, ಮೋಟಾರು ಕೂಡಾ ಜಖಂಗೊಂಡಿವೆ.
ಗ್ರಾಮದ ಬಿ.ಎನ್.ಜಯರಾಜ್ ಅವರ ಬತ್ತದ ಗದ್ದೆಗೆ 6 ಕಾಡಾನೆಗಳ ಹಿಂಡು ನುಗ್ಗಿದ್ದು, ಬೆಳೆ ಹಾಳಾಗಿದೆ. ಗ್ರಾಮದ ಪರಮೇಶ್, ಚಿನ್ನಪ್ಪ, ರಾಜೇಗೌಡ, ರಘು ಅವರಿಗೆ ಸೇರಿದ ತೋಟದಲ್ಲೂ ದಾಂದಲೆ ನಡೆಸಿದ ಕಾಡಾನೆ ಹಿಂಡು ಕಾಫಿ, ಬಾಳೆ ಹಾಗೂ ಏಲಕ್ಕಿ, ಅಡಿಗೆ ಬೆಳೆ ತುಳಿದು ಹಾಕಿವೆ.
ಉಪ ವಲಯ ಅರಣ್ಯಾಧಿಕಾರಿ ಧನಂಜಯ ಕುಮಾರ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.
ಹೆತ್ತೂರು, ಯಸಳೂರು ಹೋಬಳಿಗಳಲ್ಲಿ ಕಾಡಾನೆಗಳ ಕಾಟ ಹೆಚ್ಚಾಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟ ಆಗುತ್ತಿದೆ. ಕಾಡಾನೆ ಹಾವಳಿ ತಡೆಯಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.