ಶಿಗ್ಗಾವಿ: ತಾಲ್ಲೂಕಿನ ಹೋತನಹಳ್ಳಿ, ಹುಲಿಕಟ್ಟಿ ನಡುವಿನ ಹೊಲವೊಂದರಲ್ಲಿ ಬೂಸ್ಟ್ ಹಿಡಿದ ಗೋವಿನಜೋಳ ತಿಂದ ಸುಮಾರು 32 ಕುರಿಗಳು ಮೃತಪಟ್ಟಿವೆ. ಬುಧವಾರ ರಾತ್ರಿ 13 ಕುರಿಗಳು, ಗುರುವಾರ ಬೆಳಿಗ್ಗೆ 19 ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ.
ಕುರಿಗಳು ಹುಲಿಕಟ್ಟಿ ಗ್ರಾಮದ ಸಿದ್ದಬೀರಪ್ಪ ಗಡ್ಡೆ, ಹೋತನಹಳ್ಳಿ ಗ್ರಾಮದ ಬೀರಪ್ಪ ನಡಗಟ್ಟಿ, ಮಂಜು ಹುಲಗಣ್ಣವರ, ದುಂಡಸಿ ಮಕಾನಭಾಷಾ ಕಬನೂರ, ಖುರ್ಸಾಪುರ ಗ್ರಾಮದ ಬೀರಪ್ಪ, ಹುರಳಿಕುಪ್ಪಿ ಗ್ರಾಮದ ಗದಿಗೆಪ್ಪ ಗುಡ್ಡಣ್ಣವರ, ರಾಯಪ್ಪ ಹುಲಗಣ್ಣವರ, ಶಿವರಾಯಪ್ಪ ಹುಲಣ್ಣವರ ಅವರಿಗೆ ಸೇರಿವೆ.
ಹೊಲದಲ್ಲಿ ಕೊಳೆತು ಬಿದ್ದಿದ್ದ ಗೋವಿನಜೋಳ ಬೂಸ್ಟ್ ಹಿಡಿದ ಕಾರಣ ವಿಷವಾಗಿದ್ದು, ಅದನ್ನು ತಿಂದಿರುವ ಕಾರಣ ಕುರಿಗಳು ಮೃತಪಟ್ಟಿವೆ ಎಂದು ಬಂಕಾಪುರದ ಪಶುವೈದ್ಯಾಧಿಕಾರಿ ಆನಂದ ಪಾಲೇಕರ್ ತಿಳಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ: ಹಾನಿಗೆ ಒಳಗಾದ ಕುರಿಗಾರರಿಗೆ ಸರ್ಕಾರ ತಕ್ಷಣ ಪರಿಹಾರಧನ ವಿತರಣೆ ಮಾಡಬೇಕು ಎಂದು ರೈತ ಹೋರಾಟ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ಗಡ್ಡೆ ಒತ್ತಾಯಿಸಿದರು.