ರಾಮನಗರ: ಟಿಪ್ಪು ಜಯಂತಿ ನಿಷೇಧಕ್ಕೆ ಒತ್ತಾಯಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಹಾಗೂ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.
‘ರಾಜ್ಯ ಸರ್ಕಾರ ಕೇವಲ ಮತಗಳ ಆಸೆಗೋಸ್ಕರ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವೆ ವೈಮನಸ್ಸು ಮೂಡಿಸಿ ಸಮಾಜದ ಶಾಂತಿ ಕದಡುತ್ತಿದೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ‘ಟಿಪ್ಪು ಒಬ್ಬ ಮತಾಂಧ ರಾಜನಾಗಿದ್ದು, ಹಿಂದೂಗಳ ಹತ್ಯೆ ಮಾಡಿರುವುದಕ್ಕೆ ಇತಿಹಾಸದಲ್ಲಿ ಸಾಕ್ಷ್ಯಗಳಿವೆ.
ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದವರನ್ನು ಆತ ಸಾಮೂಹಿಕವಾಗಿ ಹತ್ಯೆ ಮಾಡಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ಲದೆ, ತನ್ನ ಆಳ್ವಿಕೆಯ ಅವಧಿಯಲ್ಲಿ ಬಲವಂತವಾಗಿ ಪರ್ಷಿಯನ್, ಉರ್ದು ಭಾಷೆಯನ್ನು ನಾಡಿನ ಜನರ ಮೇಲೆ ಹೇರಿದ್ದಾನೆ. ಈ ಎಲ್ಲ ಕಾರಣಗಳಿಂದಾಗಿ ಸರ್ಕಾರ ಟಿಪ್ಪು ಜಯಂತಿ ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಗಜೇಂದ್ರ ಸಿಂಗ್, ಸಂಚಾಲಕ ವೆಂಕಟೇಶ್, ಸಹ ಸಂಚಾಲಕ ರಾಜೇಶ್, ಪದಾಧಿಕಾರಿಗಳಾದ ರಾಮಾಂಜನೇಯ, ಸುರೇಶ್, ಚಂದ್ರಶೇಖರ್, ನಾಗೇಂದ್ರ, ಜಗದೀಶ ಇದ್ದರು.