ಸೊರಬ: ಶಾಲೆಯ ಸೌಂದರ್ಯ ಹಾಗೂ ಶಿಸ್ತಿನ ಬಗ್ಗೆ ಮುಖ್ಯ ಶಿಕ್ಷಕರಿಗೆ ಸರಿಸಮನಾದ ಜವಾಬ್ದಾರಿಯನ್ನು ನಿರ್ವಹಿಸುವ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯ ಮಹತ್ವದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಗುರುವಾರ ಹಮ್ಮಿಕೊಂಡ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕಾರ್ಯ ಒತ್ತಡ ಹೆಚ್ಚಾಗುತ್ತಿದೆ. ಸಿಬ್ಬಂದಿ ಒದಗಿಸಲು ಸರ್ಕಾರ ಕ್ರಮ ಕೈಕೊಳ್ಳಬೇಕು ಎಂದರು.
ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್.ಶಿವಪ್ಪ ಮಾತನಾಡಿ, ದೈಹಿಕ ಶಿಕ್ಷಕರ ಕಾರ್ಯ ವಕೀಲರ ಕೆಲಸದಷ್ಟೇ ಸರಿಸಮನಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಸಾರ್ವಜನಿಕರ ನಡುವೆ ಮೈದಾನದಲ್ಲಿ ಕೊಡುವ ತೀರ್ಪು ಮಹತ್ವದ್ದು ಎಂದರು.
ಜಿಲ್ಲಾ ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣಪ್ಪ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮಹೇಶ್ವರಪ್ಪ ಅವರು ವರ್ಗಾವಣೆ ನಿಮಿತ್ತ ಬೀಳ್ಕೊಡಲಾಯಿತು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಲಕ್ಷ್ಮಣಪ್ಪ ಹಾಗೂ ಶ್ರೀಧರ್ ಬಾಪಟ್ ಅವರನ್ನು ಸನ್ಮಾನಿಸಲಾಯಿತು. ತುಳಸಾ ವಿ. ನಾಯ್ಕ್ ಪ್ರಾರ್ಥೀಸಿ ಸಿ.ಪಿ.ಈಶ್ವರಪ್ಪ ಸ್ವಾಗತಿಸಿ, ಆರ್.ಯಂಕ್ಯಾನಾಯ್ಕ್ ನಿರೂಪಿಸಿ, ಆರ್.ಕೆ.ಶಂಕರಪ್ಪ ವಂದಿಸಿದರು.
ಶಿಕ್ಷಣ ಸಂಯೋಜಕ ಕಲೀಲ್ ಅಹ್ಮದ್, ದೈಹಿಕ ಶಿಕ್ಷಣ ಪರಿವೀಕ್ಷಕ ಉಮೇಶ್, .ಸಂಘದ ಅಧ್ಯಕ್ಷ ವಿಜಯ್ ಕುಮಾರ್, ಸಮನ್ವಯ ಅಧಿಕಾರಿ ಆಂಜನೇಯ, ಶೇಖರ್ನಾಯ್ಕ್, ಲಿಂಗರಾಜ ಗೌಡ, ಜಯಶ್ರೀ ಇದ್ದರು.