ಕೊಳ್ಳೇಗಾಲ: ‘ರಾಜ್ಯದಲ್ಲಿ ನಾಲ್ಕೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೂಳಿಸಿ ಎಲ್ಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು. ತಾಲ್ಲೂಕಿನ ನಗರಸಭೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಕ್ಷದ ಸಾಧನೆ ಮತ್ತು ಎನ್ಡಿಎ ಸರ್ಕಾರದ ವೈಫಲ್ಯವನ್ನು ಮತದಾರರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆ ಯನ್ನು ಎದುರಿಸುತ್ತೇವೆ ಎಂದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಎಲ್ಲ ಭರವಸೆ ಈಡೇರಿಸಿದೆ ಎಂದು ತಿಳಿಸಿದರು.
ಕೇಂದ್ರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಹೇಳಿಕೊಂಡ ಯಾವುದೇ ಕಾರ್ಯಕ್ರಮವನ್ನು ಯಶಸ್ವಿ ಮಾಡಿಲ್ಲ. ಜನಧನ ಖಾತೆಗೆ ಹಣ ನೀಡುವುದಾಗಿ ಹೇಳಿ ಇನ್ನೂ ಹಾಕಿಲ್ಲ. ರೈತರ ಸಾಲ ಮಾಡಿಲ್ಲ. ಇವುಗಳನ್ನು ಮತದಾರರಿಗೆ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಎದುರಿಸುತ್ತೇವೆ ಎಂದರು.
ಸಾಮಾಜಿಕ ನ್ಯಾಯ ಸಿದ್ಧಾಂತಗಳನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿದೆ. ಬಡವರು ಹಾಗೂ ನಿರ್ಗತಿಕರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಯೋಜನೆಯನ್ನು ಗುರುತಿಸಿ ಮತ್ತೊಮ್ಮೆ ಕಾಂಗ್ರೆಸ್ಗೆ ಮತದಾರರು ಬೆಂಬಲ ನೀಡಬೇಕು ಎಂದರು.
ನಂತರ ಮುಡಿಗುಂಡ, ಮೇದರ ಬೀದಿ, ಭೀಮನಗರ ಸೇರಿದಂತೆ ಹಲವು ಕಡೆ ಪಕ್ಷದ ಸಾಧನೆಯನ್ನು ಪ್ರಚಾರ ಮಾಡಿದರು. ನಗರಸಭೆ ಅಧ್ಯಕ್ಷ ಶಾಂತರಾಜು, ಮಾಜಿ ಶಾಸಕ ಎಸ್.ಬಾಲರಾಜು, ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಕಿನಕನಹಳ್ಳಿ ರಾಚಯ್ಯ, ಮುಖಂಡರಾದ ಬಿ.ಶಾಂತರಾಜು, ಚೇತನ್ ದೊರೆರಾಜು ಇದ್ದರು.