ಉಚ್ಚಂಗಿದುರ್ಗ: ಹರಪನಹಳ್ಳಿ ತಾಲ್ಲೂಕಿನ ಅರಸಿಕೆರೆ, ಚಟ್ನಿಹಳ್ಳಿ, ಕುರೆಮಾಗನಹಳ್ಳಿ, ಕರಡಿದುರ್ಗ, ನಂದಿಕಂಬ, ಬೇವಿನಹಳ್ಳಿ, ಜಂಗಮ ತುಂಬಿಗೆರೆ, ಮೇಗಳಗೆರೆ, ನಾಗತಿಕಟ್ಟೆ, ವೊಡ್ಡಿನಹಳ್ಳಿ ಇತರೆ ಗ್ರಾಮಗಳಲ್ಲಿ ರಾಗಿ ಬೆಳೆ ಕೊಯ್ಲಿಗೆ ಬಂದಿದೆ.
ಕೊಯ್ದು ಗೂಡು ಹಾಕಲು ರೈತರಿಗೆ ಕೂಲಿಕಾರರು ಸಿಗದೇ ರೈತರು ಕಂಗಾಲಾಗಿದ್ದಾರೆ. ಮಳೆರಾಯನ ಕಣ್ಣಾಮುಚ್ಚಾಲೆ ನಡುವೆ ರೈತರು ರಾಗಿ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದು, ಸೈನಿಕ ಹುಳು ಹಾವಳಿಯಿಂದ ತತ್ತರಿಸಿದ್ದರು. ನಿರಂತರ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಈ ಭಾಗದ ರೈತರಿಗೆ ಕೂಲಿ ನೀಡಲು ಪರಿತಪಿಸುವಂತಾಗಿದೆ.
ಕೂಲಿಕಾರರಿಗೆ ಹೆಚ್ಚಿದ ಡಿಮ್ಯಾಂಡ್: ಕೊಯ್ಲಿಗೆ ಬಂದಿರುವ ರಾಗಿ ಬೆಳೆಯನ್ನು ದುಂಡು ಹಾಕಲು, ಕೂಲಿಕಾರರು ಗುತ್ತಿಗೆ ಆಧಾರದ ಮೇಲೆ ಪ್ರತಿ ಎಕರೆಗೆ ₹ 5000 ದಿಂದ 7000ದವರೆಗೆ ಬೇಡಿಕೆ ಇದೆ.
ಕಳೆದ ವರ್ಷ ₹ 1000 ದಿಂದ 2000ಗಳಷ್ಟಿದ್ದ ಗುತ್ತಿಗೆ ಕೂಲಿ ಏಕಾಏಕಿ ಡಿಮ್ಯಾಂಡ್ ನಡೆಯುತ್ತಿದೆ. ₹ 200 ರೂಪಾಯಿಗಳಂತೆ ದಿನದ ಕೂಲಿಗೆ ಸಿಗುತ್ತಿದ್ದ ಕಾರ್ಮಿಕರು ₹ 400 ಕೂಲಿ ಪಡೆಯುತ್ತಿದ್ದಾರೆ. ಪ್ರಾಕೃತಿಕ ವೈಪರಿತ್ಯತೆಯಿಂದ ನಿರಾಳರಾಗಿದ್ದ ರೈತರಿಗೆ ಕೂಲಿಕಾರರು ನುಂಗಲಾರದ ತುತ್ತಾಗಿದ್ದಾರೆ.