ಅರಸೀಕೆರೆ: ಜೆಡಿಎಸ್ ವಿಕಾಸ ಯಾತ್ರೆ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಮಾತನಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ದೇವೇಗೌಡ, ‘ಮಾತಿನ ಮೇಲೆ ಹಿಡಿತವಿರಲಿ’ ಎಂದು ಹರಿಹಾಯ್ದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು ವಿಕಾಸ ಯಾತ್ರೆ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ಗಮನಿಸಿದ್ದೇನೆ. ನಾನು ಇಲ್ಲಿಯವರೆವಿಗೆ ತಡೆದಿದ್ದೇನೆ. ನನಗೂ ಮಾತನಾಡಲು ಬರುತ್ತದೆ ಎಂದು ಹೇಳಿದರು.
‘ನನ್ನ ಒಂದೂವರೆ ವರ್ಷದ ಅಧಿಕಾರವಧಿ, ಕುಮಾರಸ್ವಾಮಿ ಅವರ 20 ತಿಂಗಳು ಅಧಿಕಾರದಲ್ಲಿದ್ದಾಗ ಏನು ಅಬಿವೃದ್ಧಿ ಆಗಿದೆ ಎಂಬುದು ಜನರಿಗೆ ತಿಳಿದಿದೆ. ಐ.ಟಿ, ಬಿ.ಟಿ ಕೈಗಾರಿಕೆ ಪ್ರಗತಿಗೆ ಅಡಿಪಾಯ ಹಾಕಿದ್ದು ಯಾರು? ವ್ಯಂಗ್ಯವಾಗಿ ಮಾತನಾಡಲು ನಾಚಿಕೆ ಆಗುವುದಿಲ್ಲವೇ’ ಎಂದು ಕೆಂಡಾಮಂಡಲರಾದರು.
‘ನಾನು ಯಡಿಯೂರಪ್ಪ ಅಥವಾ ಸಿದ್ದರಾಮಯ್ಯ ಬಗ್ಗೆ ಅಗೌರವದಿಂದ ಮಾತನಾಡಿಲ್ಲ, ಯಾರೂ ನನ್ನನ್ನೂನ್ನು ಕೆಣಕುವುದು ಬೇಡ. ಭಾಗ್ಯಗಳ ಮೂಲಕ ಏನೆಲ್ಲಾ ವಿಕಾಸ ಮಾಡಿದ್ದೀರಾ? ಯಾವ ಸ್ವಾಮೀಜಿಗೆ ಏನು ಹಂಚಿಕೆ ಮಾಡಿದ್ದೀರಾ ಎಂಬುದೂ ನನಗೆ ಗೊತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
‘ಕುಮಾರಸ್ವಾಮಿ ಅವರ ವಿಕಾಸ ಯಾತ್ರೆಗೆ ಜನರನ್ನು ಹಣಕೊಟ್ಟು ಕರೆಸಲಾಗುತ್ತಿದೆಯೇ? ತರೀಕೆರೆಯಲ್ಲಿ ಎಷ್ಟು ಜನರು ಸೇರಿದ್ದರು? ಕುಮಾರಸ್ವಾಮಿ ಅವರಿಗೆ ಜನಾಶೀರ್ವಾದ ಎಷ್ಟಿದೆ ಎಂಬುದು ಗೊತ್ತಾಯಿತೆ?’ ಎಂದು ಪ್ರಶ್ನಿಸಿದರು.
ಮುಂದಿನ ಚುನಾವಣೆಯಲ್ಲಿ ನಿಮ್ಮ ಕುಟುಂಬದಿಂದ ಎಷ್ಟು ಮಂದಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಗೆ ಸಿಟ್ಟಾದ ಅವರು, ‘ಬಿಸಾಕ್ರಿ, ಅದನ್ನು ಜನ ನಿರ್ಧಾರ ಮಾಡ್ತಾರೆ. ಆ ಮೂಲಕ ಪಕ್ಷಕ್ಕೆ ಕಪ್ಪುಚುಕ್ಕೆ ಇಡಲು ಯಾರಿಂದಲೂ ಆಗಲ್ಲ. ಇದು ಸಣ್ಣ ವಿಷಯ. ಅಂತಿಮವಾಗಿ ನಾನೇ ತೀರ್ಮಾನ ಮಾಡುವೆ’ ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ನಗರಸಭಾ ಅಧ್ಯಕ್ಷ ಎಂ.ಸಮೀವುಲ್ಲಾ, ಜಿ.ಪಂ ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ಮುಖಂಡರಾದ ಧರ್ಮಶೇಖರ್ ನಾಗರಾಜ್ ಇದ್ದರು.