ಚೆನ್ನೈ/ಕಡಲೂರ್: ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಮತ್ತು ಅವರ ಸಂಬಂಧಿಕರ ಮನೆ ಹಾಗೂ ಇತರ ಸ್ಥಳಗಳಲ್ಲಿ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ನಡೆಸಿರುವ ತಪಾಸಣೆ ಸತತ ಮೂರನೇ ದಿನವಾದ ಶನಿವಾರವೂ ಮುಂದುವರಿದಿದೆ.
ಶೋಧದ ವೇಳೆ ವಶಪಡಿಸಿಕೊಂಡ ನಗದು ಹಾಗೂ ಇತರ ದಾಖಲೆಗಳ ಬಗ್ಗೆ ಅವರು ಮಾಹಿತಿ ನೀಡಿಲ್ಲ.
ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವು ಕಡೆಗಳಲ್ಲಿ ಇದೇ 9ರಿಂದ 1000 ಅಧಿಕಾರಿಗಳ ಕೆಲವು ತಂಡಗಳು 187 ಸ್ಥಳಗಳಲ್ಲಿ ತಪಾಸಣೆ ನಡೆಸಿದ್ದಾರೆ.
ಕಡಲೂರಿನಲ್ಲಿ ಎರಡು ಮನೆಗಳು ಹಾಗೂ ಒಂದು ಚಿನ್ನದ ಅಂಗಡಿಯಲ್ಲಿ 10 ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದಾರೆ.ಎರಡು ಮನೆಗಳಲ್ಲಿ ಒಂದು ಶಶಿಕಲಾ ಅವರ ಜ್ಯೋತಿಷಿಗೆ ಸೇರಿದೆ.
ಹಣಕಾಸು ಸಚಿವಾಲಯದ ಆರ್ಥಿಕ ಗುಪ್ತಚರ ಘಟಕ ನೀಡಿರುವ ಮಾಹಿತಿ ಹಾಗೂ ಸಂಗ್ರಹಿಸಿರುವ ವಿವರಗಳ ಆಧಾರದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ತೆರಿಗೆ ವಂಚಿಸುವುದಕ್ಕಾಗಿ ನಕಲಿ ಕಂಪೆನಿಗಳ ಸ್ಥಾಪನೆ, ಸಂಶಯಾಸ್ಪದ ಬಂಡವಾಳ ಹೂಡಿಕೆ,ಅಕ್ರಮ ಹಣ ವರ್ಗಾವಣೆ, ನಕಲಿ ಖಾತೆ ಹೊಂದಿರುವ ಆರೋಪಗಳನ್ನು ಶಶಿಕಲಾ ವಿರುದ್ಧ ಹೊರಿಸಲಾಗಿದೆ.
ಪಿತೂರಿ: ‘ಇದೊಂದು ಪಿತೂರಿಯಾಗಿದ್ದು, ನನ್ನನ್ನು ಮತ್ತು ಶಶಿಕಲಾ ಅವರನ್ನು ರಾಜಕಾರಣದಿಂದ ಹೊರಹಾಕಲು ಶೋಧ ನಡೆಸಲಾಗಿದೆ’ ಎಂದು ಎಐಎಡಿಎಂಕೆ ಮುಖಂಡ ಟಿ.ಟಿ.ವಿ. ದಿನಕರನ್ ಆರೋಪಿಸಿದ್ದಾರೆ.