ಕೋಲ್ಕತ್ತ: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡಲು ಭಾರತ ಕ್ರಿಕೆಟ್ ತಂಡದ ಎಂಟು ಆಟಗಾರರು ಭಾನುವಾರ ಕೋಲ್ಕತ್ತಕ್ಕೆ ಬಂದಿಳಿದಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಸೋಮವಾರ ಇಲ್ಲಿಗೆ ಬರಲಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ನವೆಂಬರ್ 16ರಿಂದ ಇಲ್ಲಿಯ ಈಡನ್ ಗಾರ್ಡನ್ ಅಂಗಳದಲ್ಲಿ ಮೊದಲ ಪಂದ್ಯ ಆಡಲಿದೆ.
ಉಮೇಶ್ ಯಾದವ್ , ಶಿಖರ್ ಧವನ್, ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಹಾಗೂ ಕೋಚ್ ರವಿಶಾಸ್ತ್ರಿ ಕೋಲ್ಕತ್ತಗೆ ಬಂದಿದ್ದಾರೆ.
ಆಟಗಾರರಿಗೆ ಡಿಎನ್ಎ ಫಿಟ್ನೆಸ್ ಪರೀಕ್ಷೆ: ಭಾರತ ಕ್ರಿಕೆಟ್ ತಂಡದ ಆಟಗಾರರು ಡಿಎನ್ಎ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಇದರಿಂದ ಪ್ರತಿಯೊಬ್ಬ ಆಟಗಾರನ ಫಿಟ್ನೆಸ್ ಮಟ್ಟದ ಬಗ್ಗೆ ನಿಖರ ಮಾಹಿತಿ ದೊರೆಯಲಿದೆ.
ಈ ಪರೀಕ್ಷೆಯಿಂದ ಪ್ರತಿ ಆಟಗಾರರು ತಮ್ಮ ವೇಗ, ರಕ್ತದಲ್ಲಿ ಕೊಬ್ಬಿನಾಂಶದ ಪ್ರಮಾಣ, ಒತ್ತಡ ನಿರ್ವಹಣೆ, ಗಾಯದಿಂದ ಚೇತರಿಸಿಕೊಳ್ಳಲು ತೆಗೆದುಕೊಳ್ಳುವ
ಸಮಯ, ಸ್ನಾಯುಗಳ ಬೆಳವಣಿಗೆಗಳಲ್ಲಿ ಸುಧಾರಣೆ ಕಂಡುಕೊಳ್ಳಲು ಸಹಾಯವಾಗಲಿದೆ.
ತಂಡದ ಟ್ರೇನರ್ ಶಂಕರ್ ಬಸು ಅವರ ಶಿಫಾರಸಿನ ಆಧಾರದ ಮೇಲೆ ಬಿಸಿಸಿಐ ಈ ಪರೀಕ್ಷೆಯನ್ನು ನಡೆಸಲಿದೆ. ಮುಂದಿನ ದಿನಗಳಲ್ಲಿ ಆಟಗಾರರ ಫಿಟ್ನೆಸ್ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸುವ ಉದ್ದೇಶವನ್ನು ಬಿಸಿಸಿಐ ಹೊಂದಿದೆ.