ಬಾಗೇಪಲ್ಲಿ: 'ತಾಲ್ಲೂಕುನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಪ್ರತಿಯೊಬ್ಬ ಗ್ರಾಮ ಪಂಚಾಯತಿ ಸದಸ್ಯರು ಶೌಚಾಲಯಗಳು ನಿರ್ಮಿಸುವ ದೃಢ ಸಂಕಲ್ಪದೊಂದಿಗೆ ಮುಂದಾಗಬೇಕಾಗಿದೆ' ಎಂದು ನೀರು ಮತ್ತು ನೈರ್ಮಲ್ಯ ಸಮಿತಿಯ ಉಪನಿರ್ದೇಶಕಿ ವಿಮಲಾ ಸಲಹೆ ನೀಡಿದರು.
ತಾಲ್ಲೂಕಿನ ಪಾತಪಾಳ್ಯ ಹಾಗೂ ತೊಳ್ಳಪಲ್ಲಿ ಗ್ರಾಮ ಪಂಚಾಯತಿಗಳಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೇಂದ್ರ ಕಚೇರಿಯಿಂದ ಬಂದಿದ್ದ ತಂಡ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಜನಜಾಗೃತಿ ಅಭಿಯಾನಕ್ಕಾಗಿ ತೊಳ್ಳಪಲ್ಲಿ ಗ್ರಾಮದಲ್ಲಿ ಈಚೆಗೆ ಗ್ರಾಮ ವಾಸ್ತವ್ಯ ಮಾಡಿದರು.
ಇದಕ್ಕೂ ಮುನ್ನಾ ಪಾತಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಗ್ರಾಮಕ್ಕೇ ಭೇಟಿ ನೀಡಿ ಶೌಚಾಲಯಗಳ ಗುರಿ ಸಾಧನೆ ಹಾಗೂ ಬಳಕೆಯ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿ, ಸಾರ್ವಜನಿಕರು ನಿರ್ಮಿಸಿರುವ ಶೌಚಾಲಯಗಳನ್ನು ಪರಿಶೀಲಿಸಿದರು.
ಸ್ಥಳದಲ್ಲೆ ಇದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು. ವಿಮಲಾ ಮಾತನಾಡಿ, 'ನಾವು ಗ್ರಾಮಕ್ಕೆ ಭೇಟಿ ನೀಡಿ ಐದು ನಿಮಿಷ ಮಾತನಾಡಿ ಹೊರಟು ಹೋದರೆ ಜನರು ಶೌಚಾಲಯಗಳು ನಿರ್ಮಿಸುವುದಿಲ್ಲ ಎಂದು ಅವರು ಹೇಳಿದರು.
‘ನಮ್ಮ ದೇಶ ಹಾಗೂ ರಾಜ್ಯ ಹಳ್ಳಿಗಳಿಂದ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿರುವ ಹಳ್ಳಿಯ ಜನರೊಂದಿಗೆ ಬೆರತು ಗ್ರಾಮ ವಾಸ್ತವ್ಯ ಮಾಡಿದರೆ ಇಲ್ಲಿನ ಜನರ ಬದುಕಿನ ಸ್ಥಿತಿಗತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಗ್ರಾಮದ ಜನರ ಮನಸ್ಥಿತಿಯನ್ನು ಅರಿತು ಶೌಚಾಲಯ ನಿರ್ಮಾಣಕ್ಕೆ ಇರುವ ಅಡಚಣೆಗಳ ಬಗ್ಗೆ ತಿಳಿದುಕೊಂಡು ಶೌಚಾಲಯದ ಮಹತ್ವವನ್ನು ತಿಳಿಸಿ ಶೇ 100 ರಷ್ಟು ಶೌಚಾಲಯವನ್ನು ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡುವುದೆ ನಮ್ಮ ತಂಡದ ಗುರಿಯಾಗಿದೆ' ಎಂದರು.
ಗ್ರಾಮ ವಾಸ್ತವ್ಯದಲ್ಲಿ ಸ್ವಚ್ಛ ಭಾರತ ಮಿಷನ್ ರಾಜ್ಯ ಸಂಯೋಜನಾಧಿಕಾರಿಗಳಾದ ರಾಮಾಂಜನೇಯ, ಎಸ್.ಪ್ರಪುಲ್ಲಾ, ಕೆ.ವಿ.ಜಗದೀಶ್, ತಾಲ್ಲೂಕು ಪಂಚಾಯಿತಿ ಕಾರ್ಯ
ನಿರ್ವಾಹಣಾದಿಕಾರಿ ರೆಡ್ಡಪ್ಪ ಇದ್ದರು.