ನರಗುಂದ: ‘ಮಹದಾಯಿ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಿ, ಸರ್ಕಾರದ ಮೇಲೆ ಒತ್ತಡ ಹೇರಬೇಕು. ಗೋವಾ ಮುಖ್ಯಮಂತ್ರಿ ಯೋಜನೆ ಜಾರಿಗೆ ಸಹಕರಿಸುವಂತೆ ಮಾಡಬೇಕು’ ಎಂದು ಮಹದಾಯಿ ಹೋರಾಟ ಸಮಿತಿಯ ಕೋಶಾಧ್ಯಕ್ಷ ಎಸ್.ಬಿ.ಜೋಗಣ್ಣವರ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 851ನೇ ದಿನ ಭಾನುವಾರ ಅವರು ಮಾತನಾಡಿದರು.
‘ಗೋವಾ ಸಹಕಾರ ಇಲ್ಲದೇ ಮಹದಾಯಿ ನೀರು ಪಡೆಯಲು ಸಾಧ್ಯವಿಲ್ಲ. ಈ ಭಾಗದ ಶಾಸಕರು, ಸಂಸದರು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲಿಯವರೆಗೆ ರೈತರ ಮನವಿಗೆ ಯಾರೂ ಸ್ಪಂದಿಸಿಲ್ಲ. ಇನ್ನಾದರೂ ಉಭಯ ಸರ್ಕಾರಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ರೈತರು ಹೊಸ ಹೋರಾಟಕ್ಕೆ ಮುನ್ನುಡಿ ಬರೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.
‘ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮ ಪಾಲಿನ ನೀರಿನ ಹಕ್ಕು ಪಡೆಯುವ ಸಲುವಾಗಿ ಮೂರು ವರ್ಷದಿಂದ ಧರಣಿ ನಡೆಸುತ್ತಿದ್ದೇವೆ. ನಮ್ಮ ಹೋರಾಟವನ್ನು ಜನಪ್ರತಿನಿಧಿಗಳು ಲಘುವಾಗಿ ಕಾಣಬಾರದು. ಮಹದಾಯಿ ಯೋಜನೆ ಜಾರಿಗಾಗಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ಮೇಲೆ ನಿರಂತರ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು.