ಕೆ.ಆರ್.ನಗರ: ಪ್ರತಿಯೊಬ್ಬರು ಮಾನವೀಯ ಮೌಲ್ಯ ಅಳವಡಿಸಿ ಕೊಂಡು ವರದಕ್ಷಿಣೆ, ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಯಂತಹ ಮೌಢ್ಯಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಶ್ರೀನಾಥ್ ಸಲಹೆ ನೀಡಿದರು.
ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ ಮತ್ತು ತಾಲ್ಲೂಕು ಆಡಳಿತಾ ಧಿಕಾರಿಗಳ ಆಶ್ರಯದಲ್ಲಿ ಶುಕ್ರವಾರ ಸಂಜೆ ನಡೆದ ‘ಸೇವೆಯ ಸಂಪರ್ಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರೂ ಕಾನೂನು ತಿಳಿದುಕೊಳ್ಳ ಬೇಕು. ಗ್ರಾಮದಲ್ಲಿ ನಡೆಯುವ ಕಲಹ ದೊಡ್ಡದು ಮಾಡಿಕೊಳ್ಳದೇ ಸ್ಥಳೀಯವಾಗಿಯೇ ಬಗೆಹರಿಸಿಕೊಂಡರೆ ಆರ್ಥಿಕ ನಷ್ಟದಿಂದ ಪಾರಾಗಬಹುದು. ನ್ಯಾಯಾಲಯದಲ್ಲೂ ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಮೇಶ್ ಗಾಣಿಗೇರ್, ಹುಟ್ಟಿನಿಂದ ಸಾಯುವವರೆಗೆ ಕಾನೂನು ಕಟ್ಟಳೆಗಳ ನಡುವೆ ಜೀವನ ನಡೆಸಬೇಕಾಗುತ್ತದೆ. ಕಾನೂನು ಸದಾ ರಕ್ಷಣೆ ನೀಡುತ್ತದೆ ಎಂದರು.
ಸರ್ಕಾರಿ ಅಭಿಯೋಜಕ ಪ್ರಕಾಶ್, ಮಹಿಳಾ ಸಂರಕ್ಷಣಾಧಿಕಾರಿ ಗಾಯತ್ರಿ ಹಂಡಿ, ಹಿರಿಯ ವಕೀಲರಾದ ಬಿ.ಕೆ.ಕೃಷ್ಣರಾಜೇ ಅರಸ್, ಕೆ.ಆರ್.ಶಿವಪ್ಪ, ಜಿ.ಆರ್.ರಾಮೇಗೌಡ, ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಮಹದೇವಪ್, ಬ್ಯಾಡರಹಳ್ಳಿ ಜಯರಾಮೇಗೌಡ ಇತರರು ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾ.ಪಂ ಅಧ್ಯಕ್ಷೆ ಸರಸಮ್ಮ ರಾಮೇಗೌಡ, ವಕೀಲರ ಸಂಘದ ಕಾರ್ಯದರ್ಶಿ ಧರ್ಮ, ಕೊಡಿಯಾಲ ಮಹೇಶ್, ಕೆ.ಪಿ.ಮಂಜುನಾಥ್, ಗ್ರಾ.ಪಂ ಉಪಾಧ್ಯಕ್ಷ ರಾಮೇಗೌಡ, ಸದಸ್ಯ ಮಹದೇವ್, ಮುಖಂಡ ರಾಜಶೇಖರ್, ಗ್ರಾಮಸ್ಥರು ಇದ್ದರು.