ಮದ್ದೂರು: ತಾಲ್ಲೂಕಿನ ವಿವಿಧ ಗ್ರಾಮ ಗಳಲ್ಲಿ ಭತ್ತದ ಬೆಳೆಗೆ ಕಂಬಳಿ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೈತರನ್ನು ಕಂಗಾಲಾಗಿಸಿದೆ. ಮೂರು ವರ್ಷಗಳಿಂದ ಬರದ ಸಂಕಷ್ಟಕ್ಕೆ ಸಿಲುಕಿ ಬೆಳೆ ಕಳೆದುಕೊಂಡಿದ್ದ ರೈತರು ಈ ಬಾರಿ ಲಭ್ಯವಿದ್ದ ನೀರಿನಲ್ಲಿ ಕಷ್ಟಪಟ್ಟು ಬೆಳೆದ ಭತ್ತಕ್ಕೆ ಹುಳುವಿನ ಬಾಧೆ ಕಾಣಿಸಿಕೊಂಡಿರುವುದು ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆ ಕೈ ಸೇರುವ ಮುನ್ನವೇ ಕಾಣಿಸಿಕೊಂಡ ಹುಳುವಿನ ಬಾಧೆ ರೈತರ ನ್ನು ನಷ್ಟದ ಸುಳಿಗೆ ಸಿಲುಕಿಸುವಂತೆ ಮಾಡಿದೆ.
ಸಮೀಪದ ಚನ್ನಸಂದ್ರ ಗ್ರಾಮದ ಕೃಷಿಕರಾದ ಸುರೇಶ್, ಶಿವಪ್ಪ, ಪ್ರತಾಪ್, ಜಯರಾಮು ಸೇರಿದಂತೆ ಈ ಭಾಗದ ಸುಮಾರು 20ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಧೆ ಕಾಣಿಸಿಕೊಂಡಿದೆ.
ಭತ್ತದ ಬುಡದಿಂದ ಕಾಣಿಸಿಕೊಳ್ಳುವ ಈ ಹುಳುಗಳು ತೆನೆಯನ್ನು ತಿಂದು ಹಾಕುತ್ತವೆ. ಅಳಿದುಳಿದ ಭತ್ತದ ಕಾಳುಗಳು ಕೆಳಕ್ಕೆ ಬಿದ್ದು ನಾಶವಾಗುತ್ತಿವೆ. ‘ಕೃಷಿ ಇಲಾಖೆ ಅಧಿಕಾರಿಗಳು ಹುಳುವಿನ ಬಾಧೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ನಷ್ಟದ ಅಂದಾಜು ಮಾಡಬೇಕಿದೆ.
ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಬೇಕು. ಈ ಬಾಧೆ ಇನ್ನಷ್ಟು ಭತ್ತದ ಗದ್ದೆಗಳಿಗೆ ಹರಡುವ ಮುನ್ನ ಹುಳು ಹಾವಳಿ ನಿಯಂತ್ರಣಕ್ಕೆ ಸಲಹೆ ಸೂಚನೆ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.