ಶಕ್ತಿನಗರ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಗ್ರಾಹಕರಿಂದ ತುಂಬಿರುತ್ತಿದ್ದ ಇಲ್ಲಿನ ವಾರದ ಸಂತೆಯಲ್ಲಿ ತರಕಾರಿ ಬೆಲೆ ವಿಪರೀತ ಹೆಚ್ಚಾಗಿದ್ದರಿಂದ ವಹಿವಾಟು ಕಳೆಗುಂದಿತ್ತು.
ಪ್ರತಿ ಕೆ.ಜಿ ಟೊಮೆಟೊ, ಈರುಳ್ಳಿ ₹50, ಬದನೆಕಾಯಿ, ಗೆಡ್ಡೆಕೋಸು, ಸೌತೆಕಾಯಿ, ಹಸಿಮೆಣಸಿನ ಕಾಯಿ, ಹೂ ಕೋಸು, ಬೆಂಡೆಕಾಯಿ ₹60, ಆಲೂಗಡ್ಡೆ ₹40ಕ್ಕೆ ಮಾರಾಟವಾಗುತ್ತಿದೆ. ಜನ ಸಾಮಾನ್ಯರು ತರಕಾರಿ ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ.
ತರಕಾರಿ ಬೆಲೆ ವಾರದಲ್ಲಿ ದುಪ್ಪಟ್ಟಾಗಿದ್ದು, ₹500 ಖರ್ಚು ಮಾಡಿದರೂ ಬ್ಯಾಗ್ ತುಂಬುತ್ತಿಲ್ಲ. ಈ ಬೆಲೆ ಏರಿಕೆಯಿಂದ ಸ್ವಲ್ಪವೇ ತರಕಾರಿ ಖರೀದಿಸಿ ಜೀವನ ಸಾಗಿಸುವಂತಾಗಿದೆ ಎಂದು ಅರಷಿಣಿಗಿ ದೇವೇಂದ್ರ ಹೇಳಿದರು.
‘ಧಾರಣೆ ಏರಿಕೆಯಿಂದ ಗ್ರಾಹಕರು ಖರೀದಿಗೆ ಹಿಂಜರಿಯುತ್ತಿದ್ದಾರೆ. ಇದರಿಂದ ತರಕಾರಿ ಉಳಿದುಕೊಂಡು ನಷ್ಟವಾಗುವ ಭೀತಿ ಎದುರಾಗಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.