ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ ಸಿಂಪಡಿಸುವ ಕುಟುಂಬಗಳ ಕಥೆ–ವ್ಯಥೆ

Last Updated 14 ನವೆಂಬರ್ 2017, 5:27 IST
ಅಕ್ಷರ ಗಾತ್ರ

ಕುರುಗೋಡು: ಮುಂಗಾರು ಅವಧಿಯಲ್ಲಿ ಎಲ್ಲೆಡೆ ಕಾರ್ಮಿಕರ ಸಮಸ್ಯೆ ಸಾಮಾನ್ಯ. ದುಬಾರಿ ಕೂಲಿ ನೀಡಿದರೂ ಕೃಷಿ ಕಾರ್ಮಿಕರ ಸಿಗೋದು ಕಷ್ಟ. ಆದರೆ, ಕುರುಗೋಡು ಹೋಬಳಿಯಲ್ಲಿ ರೈತರು ಬೆಳೆದ ಭತ್ತ, ಮೆಣಸಿನಕಾಯಿ, ಹತ್ತಿ ಸೇರಿ ಹಲವು ಬೆಳೆಗಳ ಸಂರಕ್ಷಣೆಗಾಗಿ ಅಪಾಯಕಾರಿ ಕ್ರಿಮಿನಾಶಕ ಔಷಧಿ ಸಿಂಪರಣೆ ಮಾಡುವುದರಲ್ಲೇ ಬದುಕು ಕಟ್ಟಿಕೊಂಡಿವೆ ಹಲವು ಕಾರ್ಮಿಕ ಕುಟುಂಬಗಳು.

ಬೆಳೆಗಳ ನಾಟಿ, ಬಿತ್ತನೆ ಕಾರ್ಯ ಮುಗಿಯುತ್ತಿದ್ದಂತೆ ಔಷಧಿ ಸಿಂಪಡಿಸುವ ಕಾರ್ಮಿಕರಿಗೆ ಇಲ್ಲಿ ಹೆಚ್ಚು ಬೇಡಿಕೆ ಬರುತ್ತದೆ. ತುಂಗಭದ್ರಾ ಕೆಳಮಟ್ಟದ ಕಾಲುವೆ ನೀರಾವರಿ ವ್ಯಾಪ್ತಿಯ ಓರ್ವಾಯಿ, ಮುಷ್ಟಘಟ್ಟೆ, ಎಚ್. ವೀರಾಪುರ, ಗೆಣಿಕೆಹಾಳು, ಸಿದ್ದಮ್ಮನಹಳ್ಳಿ, ಗುತ್ತಿಗನೂರು, ಎಮ್ಮಿಗನೂರು, ಪಟ್ಟಣ ಸೆರಗು, ಮುದ್ದಟನೂರು, ಹಾವಿ
ನಾಳ್, ಗುಂಡಿಗನೂರು, ಮಳಾಪುರ, ರುದ್ರಪಾದ, ಸೂಗೂರು, ಮಣ್ಣೂರು ಮತ್ತು ನಡವಿ ಗ್ರಾಮಗಳಲ್ಲಿ ನೂರಾರು ಕೂಲಿ ಕಾರ್ಮಿಕರು ಔಷಧಿ ಸಿಂಪರಣೆಯನ್ನೇವೃತ್ತಿಯಾಗಿಸಿಕೊಂಡಿವೆ.

ಕೃಷಿಕರು ಬೆಳಗಿನ ಜಾವ ಔಷಧಿ ಸಿಂಪರಣೆ ಮಾಡುವ ಕಾರ್ಮಿಕರ ಮನೆಗೆ ತೆರಳಿ ಅವರನ್ನು ಬೈಕ್‌ ಅಥವಾ ಆಟೊಗಳಲ್ಲಿ ಹೊಲ ಗದ್ದೆಗಳಿಗೆ ಕರೆದುಕೊಂಡು ಹೋಗುತ್ತಾರೆ. ಈ ಕಾರ್ಮಿಕರ ಕೆಲಸದ ಅವಧಿ ಬೆಳಿಗ್ಗೆ ಎಂಟರಿಂದ ಮಧ್ಯಾಹ್ನ ಒಂದು ಗಂಟೆವರೆಗೆ ಮಾತ್ರ. ದಿನಕ್ಕೆ ಒಬ್ಬ ಕಾರ್ಮಿಕ ಕನಿಷ್ಠ ಎರಡರಿಂದ ಮೂರು ಎಕರೆಗೆ ಔಷಧಿ ಸಿಂಪಡಿಸುತ್ತಾರೆ.

ಆರೋಗ್ಯದ ಮೇಲೆ ಪರಿಣಾಮ: ಕ್ರಿಮಿನಾಶಕ ಔಷಧಿ ಸಿಂಪಡಿಸುವ ಕೃಷಿ ಕಾರ್ಮಿಕರು ಮುಖವಾಡ, ಕೈ ಗವಸು, ಮೂಗಿನ ಕವಚ, ಕನ್ನಡಕ, ಮೈ ತುಂಬ ಸಮವಸ್ತ್ರ ಧರಿಸಿರಬೇಕು. ಆದರೆ ಈ ಭಾಗದ ಕಾರ್ಮಿಕರಿಗೆ ಇದ್ಯಾವುದರ ಪರಿವೇ ಇಲ್ಲ. ಮಾಲೀಕರಲ್ಲಿ ಇದರ ಬಗ್ಗೆ ಜಾಗೃತಿ ಇಲ್ಲ. ಹಾಗಾಗಿ ಹಲವು ಕೂಲಿ ಕಾರ್ಮಿಕರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.

ಕ್ರಿಮಿನಾಶಕ ಸಿಂಪರಣೆ ವೇಳೆ ಮುಂಜಾಗ್ರತೆ ವಹಿಸದ ಕಾರಣ ಅನೇಕ ಕಾರ್ಮಿಕರು ಮೃತಪಟ್ಟ ಉದಾಹರಣೆಗಳಿವೆ. ನೂರಾರು ಕಾರ್ಮಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕ್ರಿಮಿನಾಶಕ ಸಿಂಪರಣೆಯಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ತೊಂದರೆಯಾದರೆ ಭೂಮಿಯ ಮಾಲೀಕರು ಚಿಕಿತ್ಸೆ ಕೊಡಿಸಬೇಕು. ಆದರೆ, ಇಲ್ಲಿ ಕೆಲ ಮಾಲೀಕರು ಚಿಕಿತ್ಸೆ ಕೊಡಿಸಿದರೆ, ಮತ್ತೆ ಕೆಲವರು ಅಲ್ಪ ಸ್ವಲ್ಪ ಹಣ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ ಎಂಬುದು ಕಾರ್ಮಿಕ ಬಸಪ್ಪ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT