ಧಾರವಾಡ: ಕನ್ನಡ ನಾಡು ಕನ್ನಡಿಗರ ಸ್ವಾಭಿಮಾನದ ಪ್ರತೀಕ. ಅದು ಕೇವಲ ಕನ್ನಡ ಪ್ರದೇಶಗಳನ್ನು ಒಂದುಗೂಡಿಸುವಿಕೆಯಾಗದೇ ನಾಡು-ನುಡಿಯ ಏಳ್ಗೆ ಹಾಗೂ ಸಾಂಸ್ಕೃತಿಕ ಅಭ್ಯುದಯಕ್ಕೆ ಚೇತೋಹಾರಿಯಾಗಿದೆ’ ಎಂದು ಎನ್.ಟಿ.ಎಸ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ ವೀರಣ್ಣ ಒಡ್ಡೀನ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘ ನವಲೂರಿನ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪ್ರಜಾ ಕಲ್ಯಾಣದ ಉದಾತ್ತ ತತ್ವಗಳನ್ನು ಕನ್ನಡಿಗರು ಸಾವಿರಾರು ವರ್ಷಗಳ ಹಿಂದೆಯೇ ಜೀವನ ಮೌಲ್ಯಗಳೆಂದು ಬದುಕಿನಲ್ಲಿ ಅಳವಡಿಸಿಕೊಂಡಿದ್ದರು. ಆ ಆದರ್ಶಗಳನ್ನು ಮುಂದುವರಿಸಬೇಕಾದ ಅಗತ್ಯವಿದೆ’ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಜಿ. ಹಿರೇಮಠ ಮಾತನಾಡಿ, ಬ್ರಿಟಿಷರ ನೀತಿಯಿಂದ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ಕನ್ನಡದ ನೆಲದಲ್ಲಿಯೇ ಕನ್ನಡಿಗರು ಅಲ್ಪಸಂಖ್ಯಾತರಂತೆ ಬದುಕುವ ಸ್ಥಿತಿ ಉಂಟಾಗಿತ್ತು. ನಮ್ಮ ಹಿರಿಯರ ಹೋರಾಟದ ಫಲವಾಗಿ ನಾಡು ಏಕೀಕರಣಗೊಂಡಿತು’ ಎಂದರು.
ಗುರು ಹಿರೇಮಠ, ಶಿವಾನಂದ ಭಾವಿಕಟ್ಟಿ, ಎಂ.ಎನ್. ತಬರಡ್ಡಿ, ಪ್ರೊ. ಸಯ್ಯದ ಸೇರಿದಂತೆ ಅನೇಕರು ಇದ್ದರು. ಗಾಯಕ ವೈ.ಎನ್.ಮಾಳಗಿ ನಾಡಗೀತೆಗಳನ್ನು ಪ್ರಸ್ತುತಪಡಿಸಿದರು.