ಮಡಿಕೇರಿ: ‘ಕೊಡಗು ಜಿಲ್ಲೆಯ ಬಾಳೆಲೆಯ ರಾಜಾಪುರದ ಕಾಫಿ ತೋಟವೊಂದರಲ್ಲಿ ಕಾರ್ಮಿಕ ಹರೀಶ್ ಮೇಲೆ ನಾಯಿ ಬಿಟ್ಟು ಕಚ್ಚಿಸಿದ ಪ್ರಕರಣದಲ್ಲಿ ಸೂಕ್ತ ನಡೆಸಿ ಕುಟುಂಬಕ್ಕೆ ನ್ಯಾಯ ಕೊಡಿಸಲಾಗುವುದು’ ಎಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ವಿ.ಮುನಿಯಪ್ಪ ಭರವಸೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಆಯೋಗವು ಸಹ ಈ ಪ್ರಕರಣ ದಾಖಲಿಸಿಕೊಳ್ಳಲಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಲು ಕೂಡಲೇ ಶಿಫಾರಸು ಮಾಡಲಾಗುವುದು’ ಎಂದು ಹೇಳಿದರು. ವಸಂತ್ ಎಂಬುವರು ಮಾತನಾಡಿ, ‘ಕೂಲಿ ಕಾರ್ಮಿಕನಿಗೆ ನಾಯಿಯನ್ನು ಚೂ ಬಿಟ್ಟು ಕಚ್ಚಿಸಿದ್ದಾರೆ. ಇದೊಂದು ಅಮಾನವೀಯ ಕೃತ್ಯ. ಸೂಕ್ತ ತನಿಖೆ ನಡೆಸಬೇಕು’ ಎಂದು ಮೊದಲು ಒತ್ತಾಯಿಸಿದ್ದರು.
‘ಅಲ್ಲಿನ ಡಿವೈಎಸ್ಪಿ ಅವರು ಮಾಲೀಕರ ಜೊತೆಗೂಡಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. ಡಿವೈಎಸ್ಪಿ ವಿರುದ್ಧವು ಕ್ರಮ ತೆಗೆದುಕೊಳ್ಳಬೇಕು’ ಎಂದು ಇದೇ ವೇಳೆ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಭೂಮಿ ಇಲ್ಲದವರಿಗೆ ಭೂಮಿ ನೀಡಬೇಕು. ಮಾಂಗಲ್ಯ ಭಾಗ್ಯ ಯೋಜನೆಯ ಅಡಿ ₨ 2 ಲಕ್ಷ ನೀಡಬೇಕು. ಪೌಷ್ಟಿಕ ಆಹಾರ ಒದಗಿಸಬೇಕು. 94‘ಸಿ’ ಅಡಿ ನಿವೇಶನದ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಮುಖಂಡ ಭರತ್ ಆಗ್ರಹಿಸಿದರು.
ಮುಖಂಡ ಕುಡಿಯರ ಮುತ್ತಪ್ಪ ಮಾತನಾಡಿ, ತಿತಿಮತಿ ದೇವರಕಾಡು ಪೈಸಾರಿಯಲ್ಲಿ 150 ಕುಟುಂಬಗಳು ವಾಸ ಮಾಡುತ್ತಿದ್ದು, ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ವಾಲ್ನೂರು ತ್ಯಾಗತ್ತೂರು ವ್ಯಾಪ್ತಿಯಲ್ಲಿ 150 ಜೇನುಕುರುಬ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ರಸ್ತೆ ಮತ್ತಿತರ ಮೂಲ ಸೌಲಭ್ಯ ಕಲ್ಪಿಸಿಲ್ಲ. ನಮಗೆ ಸೂರು, ನೀರು, ಬೆಳಕು ನೀಡಿ ಎಂದು ಸೋಮವಾರಪೇಟೆ ತಾಲ್ಲೂಕಿನ ಬುಡುಕಟ್ಟು ಸಂಘದ ಮುಖಂಡ ಆರ್.ಕೆ. ಚಂದ್ರು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್, ಜಿ.ಪಂ ಮಾಜಿ ಅಧ್ಯಕ್ಷರಾದ ಬಿ.ಶಿವಪ್ಪ, ನಾಗರಹೊಳೆಯ ಜೆ.ಎಂ.ಸೋಮಯ್ಯ, ರಜನಿಕಾಂತ್, ಇಂದಿರಾ, ಜೆ.ಪಿ.ರಾಜು, ಕಾಳಿಂಗ, ರಾಜಪ್ಪ, ಮೋಹನ್, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಡಿವೈಎಸ್ಪಿ ಸುಂದರರಾಜ್, ಉಪ ಸಂರಕ್ಷಣಾಧಿಕಾರಿ ಸೂರ್ಯಸೇನ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್ ಹಾಜ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.