ರಾಯಚೂರು: ನಿರಂತರ ವಿದ್ಯುತ್ ಪೂರೈಸಲು ಒತ್ತಾಯಿಸಿ ಶಾಸಕರಾದ ಡಾ.ಶಿವರಾಜ ಪಾಟೀಲ ಹಾಗೂ ತಿಪ್ಪರಾಜು ಹವಾಲ್ದಾರ್ ಅವರು ಮಾಡುತ್ತಿರುವ ಪಾದಯಾತ್ರೆಯು ರಾಜಕೀಯ ಗಿಮಿಕ್ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣಾ ಇರಬಗೇರಾ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಂತರ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರದಿಂದ ಸಮರ್ಪಕವಾಗಿ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ರಾಯಚೂರಿಗೆ ನಿರಂತರ ವಿದ್ಯುತ್ ಕೊಡಲು ಸಾಧ್ಯವಾಗಿಲ್ಲ ಎಂದರು.
ಶಾಸಕರಿಬ್ಬರು ನಾಲ್ಕು ವರ್ಷ ಮೌನ ವಹಿಸಿ ಈಗ ಪ್ರತಿ ಭಟನೆ ಆರಂಭಿಸಿರುವುದು ಹಾಸ್ಯಾಸ್ಪದ. ಜಿಲ್ಲೆಯ ಕಾಂಗ್ರೆಸ್ ಮುಖಂಡರೆಲ್ಲರೂ ಸರ್ಕಾರದ ಮೇಲೆ ಈ ಬಗ್ಗೆ ನಿರಂತರ ಒತ್ತಡ ಹಾಕುತ್ತಾ ಬಂದಿದ್ದಾರೆ. ಇನ್ನು ಆರು ತಿಂಗಳಲ್ಲಿ ಸರ್ಕಾರದಿಂದ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಜಯಣ್ಣ, ಅಮರೇಗೌಡ ಹಂಚಿನಾಳ, ನಿರ್ಮಲಾ ಬೆಣ್ಣೆ, ಪಾರಸಮಲ್ ಸುಖಾಣಿ, ರುದ್ರಪ್ಪ ಅಂಗಡಿ, ಅಬ್ದಲ್ ಕರೀಂ, ಶಾಂತಪ್ಪ, ಬಸವರಾಜ ರಡ್ಡಿ ಇದ್ದರು.