ಬೆಳಗಾವಿ: ತಮ್ಮ ಕೆಲಸ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಹಾಸ್ಟೆಲ್ಗಳು ಹಾಗೂ ವಸತಿ ಶಾಲೆ, ಕಾಲೇಜುಗಳ ‘ಡಿ’ ಗ್ರೂಪ್ ನೌಕರರು ಸುವರ್ಣ ವಿಧಾನಸೌಧದ ಸಮೀಪ ಮಂಗಳವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ನೌಕರರ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ, ಸೇವಾ ಭದ್ರತೆ, ಸಮಾನವೇತನ, ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು ಹಾಗೂ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಯಿತು.
ತೀವ್ರ ವಿರೋಧದ ನಡುವೆಯೂ, ‘ಡಿ’ ದರ್ಜೆ ಹುದ್ದೆಗಳಿಗೆ ಕಾಯಂ ನೌಕರರನ್ನು ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ನೌಕರರು ತಿಳಿಸಿದರು.
‘ಅ.16ರಂದು ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ್ದೆವು. ಮನವಿ ಸ್ವೀಕರಿಸಿದ್ದ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದರು. ಆದರೆ, ಈ ಭರವಸೆ ಇಂದಿಗೂ ಈಡೇರಿಲ್ಲ. ನೇಮಕಾತಿ ನಿಯಮಾವಳಿಯನ್ನು ತಿದ್ದುಪಡಿ ಮಾಡಿಯಾದರೂ ನಮ್ಮ ಕೆಲಸ ಕಾಯಂ ಮಾಡಬೇಕು.
ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸ ಬೇಕು’ ಎಂದು ಒತ್ತಾಯಿಸಿದರು. ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ, ಸಹ ಕಾರ್ಯದರ್ಶಿ ಕೆ. ಹನುಮೇಗೌಡ, ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ ನೇತೃತ್ವ ವಹಿಸಿದ್ದರು.