ಮಲೆಮಹದೇಶ್ವರ ಬೆಟ್ಟ: ಕೊನೆಯ ಕಾರ್ತಿಕ ಜಾತ್ರೆಯ ಅಂಗವಾಗಿ ಸೋಮವಾರ ಜರುಗಿದ ಮಹದೇಶ್ವರ ಸ್ವಾಮಿಯ ಮಾಹಾಜ್ಯೋತಿ ದರ್ಶನ ಹಾಗೂ ತೆಪ್ಪೋತ್ಸವಕ್ಕೆ ಭಕ್ತರ ದಂಡೇ ಹರಿದುಬಂದಿತ್ತು. ಜಾತ್ರಾ ಮಹೋತ್ಸವದಲ್ಲಿ ಪವಾಡ ಪುರುಷನ ಮಹಾಜ್ಯೋತಿ ದರ್ಶನಕ್ಕಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸುತ್ತಮುತ್ತಲಿನ ಊರುಗಳಿಂದ ಬಂದಿದ್ದರು.
ವಿಶೇಷ ಅನ್ನದಾಸೋಹ ಏರ್ಪಡಿಸಲಾಗಿತ್ತು. ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಪಾರ ಸಂಖ್ಯೆಯ ಭಕ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಮಹದೇಶ್ವರ ಸ್ವಾಮಿಯ ಪಂಜಿನ ಸೇವೆ, ಉರುಳು ಸೇವೆ, ಹುಲಿವಾಹನ, ಬಸವವಾಹನ ಹಾಗೂ ರುದ್ರಾಕ್ಷಿ ಮಂಟಪ ವಾಹನ ಸೇವೆಯನ್ನು ನೆರವೇರಿಸಿದರು.
ಸೋಮವಾರ ರಾತ್ರಿ ಸಾಲೂರು ಬೃಹನ್ಮಠದ ಮಠಾಧೀಶ ಗುರುಸ್ವಾಮಿ ನೇತೃತ್ವದಲ್ಲಿ ದೀಪದಗಿರಿ ಒಡ್ಡಿ ನಲ್ಲಿರುವ ಮಹದೇಶ್ವರ ಸ್ವಾಮಿಯ ಪವಾಡದ ಮಹಾಜ್ಯೋತಿಯನ್ನು ಬೆಳಗಿಸಲಾಯಿತು.
ನಂತರ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲ್ಲಿಂದ ದೇವಾಲಯದ ಮುಂಭಾಗವಿರುವ ದೊಡ್ಡಕೆರಯ ಬಳಿ ತಂದು ತೆಪ್ಪೋತ್ಸವವನ್ನು ಜರುಗಿಸಲಾಯಿತು. ತೆಪ್ಪೋತ್ಸವ ಕಿಕ್ಕಿರಿದ ಭಕ್ತರು ಪಾಲ್ಗೊಂಡಿದ್ದರು. ಮೂರು ಸುತ್ತುಗಳನ್ನು ವೀಕ್ಷಿಸಲು ಕಾದಿದ್ದ ಭಕ್ತರಿಗೆ ಮಳೆ ನಿರಾಸೆ ಮೂಡಿಸಿತು.
ಬಸ್ಸಿಗಾಗಿ ಪರದಾಟ: ಜಾತ್ರೆ ನಿಮಿತ್ತವಾಗಿ ಮಲೆಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಭಕ್ತರು ಮಂಗಳವಾರ ಬೆಳಿಗ್ಗೆ ಹರಕೆ ಕಾಣಿಕೆಯನ್ನು ತೀರಿಸಿ ಮರಳಿ ಊರುಗಳಿಗೆ ಹಿಂದಿರುಗಲು ಸಕಾಲಕ್ಕೆ ಬಸ್ಸುಗಳು ಸಿಗದೆ ಪರದಾಡುವ ಸ್ಥಿತಿ ಎದುರಾಯಿತು. ಕಾರ್ಯಕ್ರಮದಲ್ಲಿ ಮಲೆ ಮಹದೇಶ್ವರ ಸ್ವಾಮಿ ಅಭಿವೃಧ್ದಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ ರೂಪಾ, ಉಪಕಾರ್ಯದರ್ಶಿ ಬಸವರಾಜಪ್ಪ, ಮಾದರಾಜು ಇದ್ದರು.