ಧರ್ಮಪುರ: ಹಿರಿಯೂರು ಪಟ್ಟಣದಲ್ಲಿ ಹೆಚ್ಚುತ್ತಿರುವ ಚಿಕೂನ್ಗುನ್ಯಾ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಗರದ ಎಲ್ಲಾ ಕಡೆ ತುರ್ತಾಗಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನಗರಸಭೆ ಸದಸ್ಯ ಜಿ.ಪ್ರೇಮ್ಕುಮಾರ್ ಒತ್ತಾಯಿಸಿದರು.
ಹಿರಿಯೂರಿನ ನಗರಸಭೆಯಲ್ಲಿ ಮಂಗಳವಾರ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪೌರ ಕಾರ್ಮಿಕರ ಕೊರತೆ ಇರುವುದರಿಂದ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿದೆ. ಹೊರಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರ ನೇಮಕಾತಿ ಆಗಬೇಕು. ನಗರದಲ್ಲಿ 131 ಕೊಳವೆಬಾವಿಗಳು ದುರಸ್ತಿಗೊಳ್ಳಬೇಕಾಗಿವೆ. ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿದ್ದು, ಕೂಡಲೇ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷ ಟಿ.ಚಂದ್ರಶೇಖರ್, ಉಪಾಧ್ಯಕ್ಷರಾದ ಇಮ್ರಾನ್ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ದಾದಾಪೀರ್, ಸದಸ್ಯರಾದ ಎ.ಮಂಜುನಾಥ್, ಪುರುಷೋತ್ತಮ, ರವಿಚಂದ್ರ, ಚಿರಂಜೀವಿ, ಆಯುಕ್ತ ರಮೇಶ್ ಸುಣಗಾರ ಮತ್ತು ಎಂಜಿನಿಯರ್ ನಯನ ಹಾಜರಿದ್ದರು.