ಅಂಕೋಲಾ: ‘ಭ್ರಷ್ಟಾಚಾರದಲ್ಲಿ ಮುಳು ಗಿರುವ ರಾಜ್ಯ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತಿರುವ ಮತದಾರರು ಭಾರತೀಯ ಜನತಾ ಪಕ್ಷದ ಕಡೆಗೆ ಭರವಸೆ ಇಟ್ಟಿದ್ದಾರೆ. ಮತದಾರರ ಆಶೀರ್ವಾದ ಪಡೆದು ಬಿಜೆಪಿ ರಾಜ್ಯದಲ್ಲಿ ಪುನಃ ಅಧಿಕಾರಕ್ಕೆ ಬರುವುದು ಖಚಿತವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಮಂಗಳವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಅವರು ಮಾತನಾಡಿದರು. ‘ಕಾರವಾರ–ಅಂಕೋಲಾ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿದೆ. ಬರುವ ಚುನಾವಣೆಯಲ್ಲಿ ಜನಾಭಿ ಪ್ರಾಯ ಮತ್ತು ಸ್ಥಳೀಯ ರಾಜಕೀಯ ಸ್ಥಿತಿಗತಿಗಳನ್ನು ಗಮನಿಸಿ ಜನರ ಸೇವೆ ಮಾಡುವಂತಹ ಅಭ್ಯರ್ಥಿಗೆ ಪಕ್ಷ ಟಿಕೇಟ್ ನೀಡಲಿದೆ’ ಎಂದರು.
‘ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ಹಾಲಕ್ಕಿ ಸಮು ದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕೆಲಸವಾಗಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರದೇ ಇನ್ನೂ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಹಾಲಕ್ಕಿ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗುವುದು’ ಎಂದು ಭರವಸೆ ನೀಡಿದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, ‘ಜಿಲ್ಲೆಯಲ್ಲಿ ಬಿಜೆಪಿ ಅಲೆಯನ್ನು ನೋಡಿ ಮತ್ತು ಅಂಕೋಲಾದಲ್ಲಿ ಸೇರಿದ ಜನರನ್ನು ಗಮನಿಸಿದರೆ ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ನಿದ್ರೆ ಮಾತ್ರೆ ಸೇವಿಸಿ ಮಲಗಬೇಕಾಗಿದೆ. ಕೆಲವರು ಅಭಿಮಾನಿ ಗುಂಪುಗಾರಿಕೆ ಮಾಡುತ್ತಿರುವವರಿಗೆ ಇಂದಿನ ಸಮಾವೇಶ ಮೋಕ್ಷ ನೀಡ ಲಿದೆ’ ಎಂದು ಬಿಜೆಪಿಯ ಕೆಲವು ಭಿನ್ನ ಮತೀಯರಿಗೆ ಪರೋಕ್ಷವಾಗಿ ತಿವಿದರು.
ಬಿಜೆಪಿ ಮುಖಂಡ ಕುಮಾರ ಬಂಗಾರಪ್ಪ ಮಾತನಾಡಿ, ‘ಎಸ್.ಬಂಗಾರಪ್ಪ ಅವರು ಕೆ.ಎಚ್.ಗೌಡ ಅವರನ್ನು ಚುನಾವಣೆಗೆ ನಿಲ್ಲಿಸಿ ಶಾಸಕರನ್ನಾಗಿ ಮಾಡಿದ್ದರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಕೆ.ಎಚ್.ಗೌಡರನ್ನು ಮೂಲೆಗುಂಪು ಮಾಡಿದೆ. ಯಡಿಯೂರಪ್ಪ ನೇತೃತ್ವದಲ್ಲಿ ಅವರನ್ನು ಬಿಜೆಪಿಗೆ ಆಹ್ವಾನಿಸುತ್ತಿದ್ದೇವೆ’ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ರಾಜ್ಯದಲ್ಲಿ ಅತ್ಯಾಚಾರ, ಭಯೋತ್ಪಾದನೆಯಂತಹ ಕೃತ್ಯಗಳು ನಿರಂತರವಾಗಿ ನಡೆಯುತ್ತಿದೆ. ಆದರೆ ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ವಿಫಲಗೊಂಡಿದ್ದು, ವಿವಿಧ ಯೋಜನೆಯ ಹೆಸರಿನಲ್ಲಿ ಜನರನ್ನು ಮರಳು ಮಾಡುತ್ತಿದೆ. ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಲಿದ್ದು, ಕಾರ್ಯಕರ್ತರ ಆಶೀರ್ವಾದದಿಂದ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಲಿದ್ದಾರೆ’ ಎಂದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಸುಕ್ರಿ ಗೌಡ, ಬಿಜೆಪಿ ಮುಖಂಡರಾದ ಕೆ.ಜಿ.ನಾಯ್ಕ, ರೂಪಾಲಿ ನಾಯ್ಕ, ನಾಗರಾಜ ನಾಯಕ, ಶಾರದಾ ನಾಯ್ಕ, ವಿ.ಎಸ್. ಪಾಟೀಲ, ರಾಮರಾವ್ ರಾಯ್ಕರ, ಪ್ರಸಾದ ಕಾರವಾರಕರ, ಎಂ.ಜಿ. ನಾಯ್ಕ, ಜಗದೀಶ ನಾಯಕ ಮೊಗಟಾ, ರವಿಕುಮಾರ, ಗಣಪತಿ ಉಳ್ವೇಕರ, ಅರುಣಕುಮಾರ ಜಿ., ಭಾರತಿ ಶೆಟ್ಟಿ, ಭಾಸ್ಕರ ನಾರ್ವೇಕರ, ದಿನಕರ ಶೆಟ್ಟಿ ಸೇರಿದಂತೆ 10 ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನಿತ್ಯಾನಂದ ಗಾಂವಕರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಸಂಜಯ ನಾಯ್ಕ ಭಾವಿಕೇರಿ, ರಾಘವೇಂದ್ರ ಭಟ್ ನಿರೂಪಿಸಿದರು. ಮನೋಜ ಭಟ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.