ಯಾದಗಿರಿ: ರಾಜ್ಯದಲ್ಲಿ ಸರ್ಕಾರಿ ಅಂಕಿಅಂಶಗಳ ಪ್ರಕಾರ 45 ಲಕ್ಷ ಜನರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ಸಚಿವಾಲಯ ರಚಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನಾ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸರ್ಕಾರ ‘ವಿಷನ್ 2025’ ಡಾಕ್ಯುಮೆಂಟ್ನಲ್ಲಿ ನಗರದ ಕೊಳೆಗೇರಿ ನಿವಾಸಿಗಳಿಗೆ ಸಂಬಂಧಿಸಿದ ಜನಸಾಮಾನ್ಯರ ಸಲಹೆಗಳನ್ನು ಸೇರ್ಪಡೆಗೊಳಿಸವಂತೆ ಆಗ್ರಹಿಸಿದರು.
‘ರಾಜ್ಯದಲ್ಲಿ ಮಾದರಿ ವಸತಿ ಹಕ್ಕು ಕಾಯ್ದೆ ಜಾರಿಯಾಗಬೇಕು. ನಿವೇಶನ ರಹಿತ ಸಮಸ್ಯೆ ಪರಿಹಾರಕ್ಕೆ ನಗರ ಪರಿಮಿತಿಯಲ್ಲಿ ಭೂಮಿ ಮೀಸಲಿಡಬೇಕು (ಲ್ಯಾಂಡ್ ಬ್ಯಾಂಕ್) ಸ್ಥಾಪಿಸಬೇಕು. ಈಗಾಗಲೇ ಘೋಷಿತ ಕೊಳೆಗೇರಿ ನಿವಾಸಿಗಳಿಗೆ ಭೂ ಒಡೆತನ ನೀಡಬೇಕು. ರಾಜ್ಯದಾದ್ಯಂತ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧೀನದಲ್ಲಿರುವ ಒಟ್ಟು 2,704 ಕೊಳಚೆ ಪ್ರದೇಶಗಳಲ್ಲಿರುವ ಜನರಿಗೆ ಭೂ ಒಡೆತನ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ‘ವಿಷನ್ 2025’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಚಿದಂಬರಂ ಅವರಿಗೆ ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.
ಸ್ಲಂ ಜನಾಂದೋಲನ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಹಣಮಂತ ಶಹಾಪೂರಕರ್, ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಪದಾಧಿಕಾರಿಗಳಾದ ಸಂಗೀತಾ ಹಪ್ಪಳ, ನಿರ್ಮಲಾ ನಾಟೇಕರ್, ಶಂಕ್ರಮ್ಮ ಕೋಟಿಮನಿ, ಯಂಕಮ್ಮ ಮಾಳಿಕೇರಿ, ವಿಶ್ವನಾಥ ನಾಯ್ಕೋಡಿ, ಮಲ್ಲಣ್ಣ ಬುಶೆಟ್ಟಿ, ಗಂಗಮ್ಮ ಇದ್ದರು.