ಅರಸೀಕೆರೆ: ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದಲ್ಲಿ ನ.19ರಂದು ಸಂಜೆ ಬೆಳಗಾವಿ ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಲಕ್ಷ ದೀಪೋತ್ಸವ ನಡೆಸಲಾಗುವುದು ಎಂದು ಪೀಠಾಧ್ಯಕ್ಷ ಶಿವಾನಂದ ಶಿವಯೋಗೀರಾಜೇಂದ್ರ ಸ್ವಾಮೀಜಿ ಬುಧವಾರ ತಿಳಿಸಿದರು.
ಕಾರ್ತಿಕ ಮಾಸ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದರು.
ಪ್ರತಿ ತಿಂಗಳು ನಡೆಯುವ ಹುಣ್ಣಿಮೆ ಮಹಾ ಮಂಗಳಾರತಿ, ಫಾಲ್ಗುಣ ಮಾಸದಲ್ಲಿ ಮೂರು ದಿನಗಳ ಕಾಲ ನಡೆಯುವ ಮಹದೇಶ್ವರ ಜಾತ್ರಾ ಮಹೋತ್ಸವ, ವೈಶಾಖ ಮಾಸದ ಬಹುಳ ಚೌತಿಯಂದು ನಡೆಯುವ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ ಪುಣ್ಯ ಸಂಸ್ಮರಣೆ ಮತ್ತು ಕಾರ್ತಿಕ ಮಾಸದ ಕಡೆ ದಿನ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಭಕ್ತಕೋಟಿಯಲ್ಲಿ ಅರಿವು ಮೂಡಿಸುತ್ತಿವೆ ಎಂದರು.
ನ. 19ರಂದು ಸಂಜೆ 6ಕ್ಕೆ ಮಠದ ಆವರಣದಲ್ಲಿರುವ ಲಿಂಗೈಕ್ಯ ಶಿವಲಿಂಗ ಸ್ವಾಮೀಜಿ ಮತ್ತು ನೀಲಮ್ಮಜ್ಜನವರ ಗದ್ದುಗೆ ಮುಂಭಾಗ ಪಂಚಮ ಶಿವಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ ಶಿವಾಚಾರ್ಯ ಸ್ವಾಮೀಜಿ ಹಾಗೂ ಭಕ್ತರ ಸಮ್ಮುಖದಲ್ಲಿ ದೀಪೋತ್ಸವ ನಡೆಯಲಿದೆ ಎಂದು ಹೇಳಿದರು.
ಸಂಜೆ 7ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾನಗಲ್ ವಿರಕ್ತಮಠದ ಶಿವಯೋಗಿ ಸ್ವಾಮೀಜಿ, ತೊಗರ್ಸಿ ಮಳೆ ಮಠದ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಮೂರು ಕಳಸಮಠದ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕರಡಿ ಗವಿಮಠದ ಶಂಕರಾನಂದ ಸ್ವಾಮೀಜಿ ಚನ್ನರಾಯಪಟ್ಟಣದ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಭಾಗವಹಿಸಲಿದ್ದು ಅಧ್ಯಕ್ಷತೆಯನ್ನು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ರಾತ್ರಿ 9.30ಗಂಟೆಗೆ ಸಾಂಸ್ಕೃ ತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಮುಖಂಡರಾದ ಎಚ್.ಪಿ. ಬಸವಲಿಂಗಪ್ಪ, ಎಚ್.ಸಿ ಮಹದೇವಪ್ಪ, ಎ.ಎಸ್. ಮಲ್ಲಿಕಾರ್ಜುನ್, ಜಿ.ಎಸ್.ದಕ್ಷಿಣಮೂರ್ತಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.