ವಿಜಯಪುರ: ಇಲ್ಲಿನ ಚನ್ನರಾಯಪಟ್ಟಣ ಸರ್ಕಲ್ ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಶಾಲಾ ಮಕ್ಕಳಿಗೆ, ನಾಗರಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಸಮಸ್ಯೆ ಪರಿಹಾರಕ್ಕೆ ಕೂಡಲೇ ಇಲ್ಲಿಗೆ ಪೊಲೀಸರನ್ನು ನಿಯೋಜನೆ ಮಾಡಬೇಕು ಎಂದು ಸ್ಥಳೀಯ ನಾಗರಿಕರಾದ ಸೋಮಶೇಖರ್, ರಾಜೇಶ್, ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ, ದೇವನಹಳ್ಳಿ ಕಡೆಯಿಂದ ಕೋಲಾರ, ಹೊಸಕೋಟೆ ಸೇರಿದಂತೆ ಅನೇಕ ಕಡೆಗಳಿಗೆ ಸಂಚರಿಸುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಂದ ಹೊರಡುತ್ತವೆ. ಸಮೀಪದಲ್ಲೆ ಶಾಲೆಗಳಿವೆ. ಸಾವಿರಾರು ಮಕ್ಕಳು ರಸ್ತೆ ದಾಟುತ್ತಿರುತ್ತಾರೆ. ಈ ವೇಳೆಯಲ್ಲಿ ವೇಗವಾಗಿ ಬರುವಂತಹ ವಾಹನಗಳನ್ನು ತಪ್ಪಿಸಿಕೊಂಡು ರಸ್ತೆ ದಾಟಲು ಮಕ್ಕಳು ಪರದಾಡುತ್ತಾರೆ ಎಂದು ದೂರಿದರು.
ಅನೇಕ ವಾಹನಗಳು ಅಪಘಾತವಾಗಿ ನಾಗರಿಕರು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಈ ಕುರಿತು ಪೊಲೀಸರಿಗೆ ಮನವಿ ಮಾಡಿದ್ದೇವೆ ಇದುವರೆಗೂ ಯಾವುದೇ ಮುಂಜಾಗ್ರತಾ ಕ್ರಮಗಳು ಕೈಗೊಂಡಿಲ್ಲ. ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ತಿರುವುಗಳ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಆದ್ದರಿಂದ ಇಲ್ಲಿ ಪೊಲೀಸರನ್ನು ನಿಯೋಜನೆ ಮಾಡಿ ಸ್ಥಳೀಯರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.