ಮಂಡ್ಯ: ರೈತರು ತಡವಾಗಿ ಭತ್ತ ನಾಟಿ ಮಾಡಿರುವ ಕಾರಣ ತೆನೆಗೆ ‘ಸೈನಿಕ’ ಹುಳು ಬಾಧೆ ಕಾಣಿಸಿಕೊಂಡಿದ್ದು ಹಾಲುಗಟ್ಟಿದ ಕಾಯಿಗಳನ್ನು ತಿಂದು ಹಾಕುತ್ತಿವೆ. ಸೈನಿಕರು ಶತ್ರುಗಳ ಮೇಲೆ ದಾಳಿ ಮಾಡುವ ಹಾಗೆ ಗುಂಪುಗುಂಪಾಗಿ ಈ ಸೈನಿಕ ಕೀಟಗಳು ಭತ್ತದ ತೆನೆಗೆ ದಾಳಿ ಮಾಡುತ್ತವೆ. ಇವು ಸಂಜೆ 6 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೂ ಕಾಯಿಯನ್ನು ತಿಂದು ನಾಶಮಾಡುತ್ತಿವೆ. ಹೀಗಾಗಿ ರೈತರು ಆತಂಕಕ್ಕೆ ಈಡಾಗಿದ್ದಾರೆ. \
ತಾಲ್ಲೂಕಿನ ಬೂದನೂರು, ಕನ್ನಲಿ, ಹಲ್ಲೆಗೆರೆ, ಕೀಲಾರ,ಕೆರೆಗೋಡು, ಹಂಚಹಳ್ಳಿ, ಹಳುವಾಡಿ, ತಗ್ಗಹಳ್ಳಿ, ಕಾರಸವಾಡಿ, ಸೂನಗಹಳ್ಳಿ, ಕೊತ್ತತ್ತಿ ಸೇರಿ ಹಲವೆಡೆ ಭತ್ತದ ಗದ್ದೆಗಳಲ್ಲಿ ಈ ಕೀಟಗಳ ಹಾವಳಿ ಕಾಣಿಸಿಕೊಂಡಿದೆ.
ಹತೋಟಿ ಕ್ರಮಗಳು: ಸೈನಿಕ ಹುಳುಗಳ ತಡೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಲವು ನಿಯಂತ್ರಣ ಕ್ರಮಗಳನ್ನು ರೈತರಿಗೆ ಸೂಚಿಸಿದ್ದಾರೆ. ಭತ್ತದ ಗದ್ದೆಯ ಬದುವಿನ ಸುತ್ತ ಇರುವ ಆಶ್ರಯ ಸಸ್ಯಗಳನ್ನು ನಾಶಪಡಿಸಬೇಕು. ಕೀಟನಾಶಕಗಳಾದ ಅಸಿಫೇಟ್ 75 ಎಸ್ಪಿ ಒಂದು ಗ್ರಾಂ ಅಥವಾ ಡೈಕ್ಲೊರೋವಾಸ್76 ಡಬ್ಲ್ಯುಎಸ್ಸಿ 1.5 ಮಿ.ಲೀ, ಟ್ರೈಜೊಫಾಸ್ 40 ಇ.ಸಿ. 2ಮಿ.ಲೀ., ಕ್ವಿನಾಲ್ಟಾಸ್ 25 ಇ.ಸಿ.2.5 ಮಿ.ಲೀ ರಾಸಾಯನಿಕವನ್ನು ಒಂದು ಲೀಟರ್ ನೀರಿನ ಜೊತೆ ಮಿಶ್ರಣ ಮಾಡಿ ಗದ್ದೆಗೆ ಸಿಂಪಡಣೆ ಮಾಡಬೇಕು. ಅಲ್ಲದೆ ಬದುಗಳ ಸುತ್ತ ಬೆಳೆದಿರುವ ಹುಲ್ಲುಗಳಿಗೂ ಸಿಂಪಡಣೆ ಮಾಡಬೇಕು.
‘ಕೀಟನಾಶಗಳನ್ನು ಸಂಜೆ 5 ಗಂಟೆಯ ನಂತರ ಸಿಂಪಡಣೆ ಮಾಡಿದರೆ ಒಳ್ಳೆಯದು. ಸಂಜೆಯಾದ ನಂತರ ಸೈನಿಕ ಹುಳು ಭತ್ತಕ್ಕೆ ದಾಳಿ ನಡೆಸುವ ಕಾರಣ ಸಂಜೆಯ ವೇಳೆ ಸಿಂಪಡಿಸಿದರೆ ಕೀಟಗಳನ್ನು ನಿಯಂತ್ರಣಕ್ಕೆ ತರಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೆಶಕಿ ಸುಷ್ಮಾ ತಿಳಿಸಿದರು.
ಭತ್ತಕ್ಕೆ ಕಂದು ಜಿಗಿ ಹುಳು ಬಾಧೆಯೂ ಕಾಣಿಸಿಕೊಂಡಿದ್ದು ಅವರು ಭತ್ತದ ರಸವನ್ನು ಹೀರುವ ಕಾರಣ ಭತ್ತದ ಪೈರು ಸುಟ್ಟಂತೆ ಕಾಣುತ್ತದೆ. ಹೀಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾರ್ಗದರ್ಶನ ಪಡೆದು ಕೀಟಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ಕೃಷಿ ಇಲಾ