ನವದೆಹಲಿ: ‘ಸರ್ಕಾರದ ಆರ್ಥಿಕ ಪುನಶ್ಚೇತನ ಕಾರ್ಯಗಳ ಬಗ್ಗೆ ಇನ್ನೂ ಅನುಮಾನವಿರುವವರು ಈಗ ತಮ್ಮ ಅಭಿಪ್ರಾಯಗಳನ್ನು ಗಂಭೀರವಾಗಿ ಪರೀಕ್ಷಿಸಿಕೊಳ್ಳಬೇಕು’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ಮೂಡೀಸ್’ ಭಾರತಕ್ಕೆ ‘ಬಿಎಎ2’ ರೇಟಿಂಗ್ ಘೋಷಿಸಿದ ಬೆನ್ನಲ್ಲೇ ಜೇಟ್ಲಿ ವಿರೋಧ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸರ್ಕಾರದ ಆರ್ಥಿಕ ಪುನಶ್ಚೇತನ ಕಾರ್ಯಗಳಿಂದ ದೇಶದ ಅರ್ಥವ್ಯವಸ್ಥೆ ಬೆಳವಣಿಗೆ ಕಾಣುತ್ತಿರುವುದನ್ನು ‘ಮೂಡೀಸ್’ ಗುರುತಿಸಿ ರೇಟಿಂಗ್ ಉನ್ನತೀಕರಿಸಿರುವುದು ಸಂತೋಷದ ವಿಷಯ. 13 ವರ್ಷದ ಬಳಿಕ ‘ಮೂಡೀಸ್’ ಭಾರತದ ರೇಟಿಂಗ್ ಉನ್ನತೀಕರಿಸಿದೆ’ ಎಂದಿದ್ದಾರೆ.
‘ನೋಟು ರದ್ಧತಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಸಂಖ್ಯೆ ಜೋಡಣೆ, ಜಿಎಸ್ಟಿ ಜಾರಿಯಂಥ ಕ್ರಮಗಳನ್ನು ಪ್ರಮುಖ ಆರ್ಥಿಕ ಸುಧಾರಣಾ ಕಾರ್ಯಗಳೆಂದು ‘ಮೂಡೀಸ್’ ಗುರುತಿಸಿದೆ’ ಎಂದು ಜೇಟ್ಲಿ ತಿಳಿಸಿದ್ದಾರೆ.