ಚಾಮರಾಜನಗರ: ನವದೆಹಲಿಯಲ್ಲಿ ಆರಂಭವಾಗಿರುವ 37ನೇ ಅಂತರ ರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕೊಳ್ಳೇ ಗಾಲದ ಎರಡು ರೇಷ್ಮೆ ಸೀರೆ ಮಳಿಗೆಗಳು ಅವಕಾಶ ಪಡೆದುಕೊಂಡಿವೆ.
ದೆಹಲಿಯ ಪ್ರಗತಿ ಮೈದಾನದಲ್ಲಿ ಇದೇ 14 ರಿಂದ 27ರವರೆಗೆ ನಡೆಯುತ್ತಿರುವ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗ, ಕೈಮಗ್ಗ ಹಾಗೂ ಜವಳಿ ಇಲಾಖೆಯಿಂದ ಮಳಿಗೆ ತೆರೆಯಲಾಗಿದೆ.
ಜಿಲ್ಲೆಯ 8 ನೇಕಾರ ಸಹಕಾರ ಸಂಘಗಳ ಮೂಲಕ ತಯಾರಾದ ರೇಷ್ಮೆ ಸೀರೆಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆಗಳನ್ನು ನವದೆಹಲಿಯಲ್ಲಿ ಈಚೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಾರುಕಟ್ಟೆಯ ಅನುಕೂಲತೆಗಾಗಿ ಕೊಳ್ಳೇಗಾಲ ಸಿಲ್ಕ್ ಸ್ಯಾರೀಸ್ (ಕೆಎಸ್ಎಸ್) ಎಂಬ ಅಧಿಕೃತ ಲೋಗೊವನ್ನು ಪರಿಚಯಿಸಲಾಗಿದೆ. ಈ ಉತ್ಪನ್ನಗಳು ಮೈಸೂರು ರೇಷ್ಮೆ ಸೀರೆಗಳಿಗೆ ಸರಿಸಮಾನ ಗುಣಮಟ್ಟ ಹೊಂದಿವೆ ಎಂದು ತಿಳಿಸಿದರು. ಮೇಳದಲ್ಲಿ ಜಿಲ್ಲೆಯ ಸೀರೆಗಳು ಗಮನ ಸೆಳೆಯಲಿವೆ. ಇದರಿಂದ ನೇಕಾರರಿಗೆ ಉತ್ತೇಜನ ಸಿಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಸ್. ಬಸವರಾಜು, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್, ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗದ ಉಪನಿರ್ದೇಶಕ ಕೆ.ಎ. ರಾಜೇಂದ್ರಪ್ರಸಾದ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಸೈಯದ್ ನಯೀಮ್ ಅಹಮದ್ ಹಾಜರಿದ್ದರು.