ತರೀಕೆರೆ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ (ಕೆಪಿಎಂಇ)ಯನ್ನು ವಿರೋಧಿಸಿ ಆಸ್ಪತ್ರೆಗಳನ್ನು ಮುಚ್ಚಿ ಹೋರಾಟ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಧೋರಣೆಯನ್ನು ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದವು.
ಗಾಂಧಿವೃತ್ತದ ಬಳಿ ಭಿತ್ತಿ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾ ಕಾರರು, ರೋಗಿಗಳ ಜೀವದ ಜತೆ ಚೆಲ್ಲಾಟವಾಡುತ್ತಿರುವ ವೈದ್ಯರ ನಡೆಯನ್ನು ಖಂಡಿಸಿ, ಸರ್ಕಾರ ವೈದ್ಯರೊಂದಿಗೆ ತುರ್ತು ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದರು.
ಮ್ಯಾಮ್ಕೋಸ್ ನಿರ್ದೇಶಕ ಆರ್. ದೇವಾನಂದ್ ಮಾತನಾಡಿ, ‘ಜನತೆ ವೈದ್ಯರ ಪರವಾಗಿದ್ದಾರೆ. ಸರ್ಕಾರದ ಜನಪರ ಕಾಯ್ದೆಯನ್ನು ನಾವೆಲ್ಲ ಬೆಂಬಲಿಸಬೇಕಿದೆ. ಸರ್ಕಾರ ಆಸ್ಪತ್ರೆಗಳ ದರಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು. ವೈದ್ಯರು ಸಮಾಜದ ಪರ ಹಾಗೂ ರೋಗಿಗಳ ಪರ ಕರ್ತವ್ಯ ನಿರ್ವಹಿಸಲಿ’ ಎಂದರು.
ಜನಚಿಂತನ ಸಂಸ್ಥೆಯ ಎನ್.ವೀರಭದ್ರಪ್ಪ ಮಾತನಾಡಿ, ‘ವೈದ್ಯರು ಮಾನವೀಯತೆ ಇಲ್ಲದವರಂತೆ ವರ್ತಿಸ ಬಾರದು. ರೋಗಿಗಳ ಜೀವದ ಜತೆ ಚೆಲ್ಲಾಟವಾಡುವ ಕೃತ್ಯ ಖಂಡನೀಯ’ ಎಂದರು.
ಡಿಎಸ್ಎಸ್ ಮುಖಂಡ ಕೆ.ನಾಗ ರಾಜ್, ಜನಸಾಮಾನ್ಯರ ಸೇವೆಯನ್ನು ಧಿಕ್ಕರಿಸಿರುವ ವೈದ್ಯರ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದರು. ಸಿಪಿಐ ಮುಖಂಡ ಸಿ.ಆರ್.ಬಸವರಾಜ್, ವೈದ್ಯರು ತಕ್ಷಣ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮಾನವೀಯತೆ ಪ್ರದರ್ಶಿಸಬೇಕು ಎಂದರು.
ಎಐಯುಟಿಸಿ ಸಂಘಟನೆಯ ವಿಜಯಕುಮಾರಿ, ವಕೀಲ ದಿನೇಶ್ ಕುಮಾರ್, ಎಪಿಎಂಸಿ ನಿರ್ದೇಶಕ ಟಿ.ಆರ್.ಶ್ರೀಧರ್, ಪತ್ರಕರ್ತ ಕೃಷ್ಣನಾಯ್ಕ, ಪುರಸಭೆ ಸದಸ್ಯ ವಜೀರ್ ಪಾಷ, ಮಧುಸೂಧನ್ ಕಕ್ರಿ, ಲೋಹಿತ್ ಇದ್ದರು.
ಅಭಿನಂದನೆ: ಪ್ರತಿಭಟನೆ ನಂತರ ಸರ್ಕಾರಿ ಆಸ್ಪತ್ರೆಗೆ ತೆರಳಿದ ಮುಖಂಡರು ವೈದ್ಯರ ನಿರಂತರ ಸೇವೆಯನ್ನು ಬೆಂಬಲಿಸಿ, ಹೂವಿನ ಹಾರ ಹಾಕಿ ಅಭಿನಂದಿಸಿ, ಸಿಹಿಯನ್ನು ಹಂಚಿದರು.