ಗುತ್ತಲ: ‘ಸರ್ಕಾರ ದೇವಸ್ಥಾನಗಳಿಗೆ ನೀಡುತ್ತಿರುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಪಡಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸಿ.ಬಿ.ಕುರವತ್ತಿಗೌಡರ ಹೇಳಿದರು.
ಪಟ್ಟಣದ ಕಲ್ಮಠದಲ್ಲಿ ನಡೆದ ಮುಜರಾಯಿ ಇಲಾಖೆಯಿಂದ ವಿವಿಧ ದೇವಸ್ಥಾನಗಳಿಗೆ ಬಿಡುಗಡೆಯಾಗದ ಅನುದಾನ ಆದೇಶ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜಿಲ್ಲಾ ಉಸ್ತುವಾರಿ ಮತ್ತು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಅವರು ಈ ವರೆಗೆ ಸುಮಾರು ₹1 ಕೋಟಿಗೂ ಅಧಿಕ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ’ ಎಂದರು.
ಕಲ್ಮಠದ ಗುರುಸಿದ್ಧ ಸ್ವಾಮಿಜಿ ಮಾತನಾಡಿ, ‘21 ಅಡಿ ಎತ್ತರದ ಬಸವೇಶ್ವರ ಏಕಶಿಲಾ ಮೂರ್ತಿ ಹಾಗೂ ಪಾರ್ಕ್, ದಾಸೋಹ ಭವನಕ್ಕೆ ಸಚಿವ ರುದ್ರಪ್ಪ ಲಮಾಣಿ ₹19 ಲಕ್ಷ ಅನುದಾನ ಬಿಡುಗಡೆ ಮಾಡಿದ್ದಾರೆ’ಎಂದರು.
ಆಶ್ರಯ ಸಮಿತಿ ಅಧ್ಯಕ್ಷ ಶಹಜಾನ್ ಸಾಬ್ ಅಗಡಿ ಮಾತನಾಡಿದರು. ಕಲ್ಮಠದ ಸಂಗನಬಸವ ಸ್ವಾಮಿಜಿ, ಪಟ್ಟಣ ಪಂಚಾಯ್ತಿ ಪ್ರಭಾರ ಅಧ್ಯಕ್ಷ ನಾಗರಾಜ ಎರಿಮನಿ, ಮುಖಂಡರಾದ ರುದ್ರಪ್ಪ ಹಾದಿಮನಿ, ಕೊಟ್ರೇಶಪ್ಪ ಅಂಗಡಿ ಇದ್ದರು.