ಉಜಿರೆ: ‘ಸಾಹಿತ್ಯ, ಸಂಗೀತ, ಕಲೆಯಿಂದ ಜೀವನ ಪರಿಪೂರ್ಣವಾಗುತ್ತದೆ. ಶ್ರದ್ಧೆ, ನಿಷ್ಠೆಯಿಂದ ಕಷ್ಟಪಟ್ಟು ಕೆಲಸ ಮಾಡಿದರೆ ಇಷ್ಟಪಟ್ಟಿದ್ದನ್ನು ಪಡೆಯಬಹುದು. ಜೀವನಾನುಭವದಿಂದ ನಾವು ಉತ್ತಮ ಸಾಹಿತ್ಯ ರಚನೆ ಮಾಡಬಹುದು’ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ 85ನೇ ಅಧಿವೇಶನ ವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ‘ನಿಜ ಜೀವನದಲ್ಲಿ ಕೇಳಿದ, ನೋಡಿದ, ಅನುಭವಿಸಿದ ಘಟನೆಗಳನ್ನು ಮನನ ಮಾಡಿ, ಬರೆದರೆ ಸಾಹಿತ್ಯ ರೂಪುಗೊಳ್ಳುತ್ತದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಮಾತನಾಡಿ, ‘ಕಾವ್ಯ, ಕವಿತೆ ಒಂದು ವಿಸ್ಮಯ ಆಗಿದೆ. ತಾಳ್ಮೆ, ಪ್ರತಿಭೆ, ಶ್ರಮ ಮತ್ತು ಜೀವನಾನುಭವದಿಂದ ಕಾವ್ಯ ಹಾಗೂ ಕವಿತೆ ರಚನೆ ಮಾಡಲು ಸಾಧ್ಯವಾಗುತ್ತದೆ. ಕವಿತೆ ಹುಟ್ಟುವುದಿಲ್ಲ, ಸಂಭವಿಸುತ್ತದೆ’ ಎಂದು ಹೇಳಿದರು.