ಉಜಿರೆ: ಮಾನವೀಯತೆಯನ್ನು ಉಳಿಸಿ ಕೊಂಡು ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವುದು ಸಾಹಿತ್ಯದ ಮೂಲ ಉದ್ದೇಶವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ 85ನೇ ಅಧಿವೇ ಶನದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಮಾತೃ ಭಾಷಾ ಶಿಕ್ಷಣದ ಮೂಲಕ ಸಾಹಿತ್ಯದ ಅಧ್ಯಯನ ಹೆಚ್ಚಾಗಿ ಎಲ್ಲರಲ್ಲಿ ಸಂವೇದನೆಗಳು, ಭಾವನೆಗಳು ಜಾಗೃತವಾಗುವಂತೆ ಮಾಡಿ, ನಮ್ಮ ನಾಡು, ನುಡಿ ಮತ್ತು ಸಂಸ್ಕೃತಿಗಳು ಉಳಿದು ನಮ್ಮತನ ಉಳಿಸಬೇಕು. ಕುಟುಂಬಗಳು ಶಾಂತಿ, ನೆಮ್ಮದಿಯಿಂದ ಬಾಳುವಂತಾಗಬೇಕು ಎಂದು ಆಶಿಸಿದರು.
ಅಧುನಿಕತೆ ಬೆಳೆದಂತೆ ಸಾಹಿತ್ಯದ ಒಲವು ಕಡಿಮೆಯಾಗಿದೆ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿರಬಹುದು. ಆದರೆ ಮೊಬೈಲ್, ಕಂಪ್ಯೂಟರ್, ಐಪ್ಯಾಡ್ಗಳ ಮೂಲಕ ಸಾಹಿತ್ಯವನ್ನು ಓದುವ ಯುವ ಸಮೂಹ ಹೆಚ್ಚಾಗಿದೆ ಎಂದು ತಿಳಿಸಿದರು.
ಜಾಗತೀಕರಣ ಮತ್ತು ಖಾಸಗೀಕರಣದೊಂದಿಗೆ ವೈಯಕ್ತಿಕ ತೆಯೂ ಸಾಮಾಜಿಕವಾಗುವ, ಸ್ಥಳೀಯ ತೆಯು ಜಾಗತೀಕರಣಗೊಳ್ಳುವ ಈಗಿನ ಸಂಧಿ ಕಾಲದಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದು ಔಚಿತ್ಯಪೂರ್ಣವಾಗಿದೆ ಎಂದರು.
21ನೇ ಶತಮಾನದ ಅರುಣೋದಯದೊಂದಿಗೆ ಕನ್ನಡ ಜಾನಪದ ಅಧ್ಯಯನದ ಸಂಕ್ರಮಣ ಸ್ಥಿತಿ, ಮಹಿಳೆಯರ ಧ್ವನಿ ಹಾಗೂ ದಲಿತ ಪರಂಪರೆಯ ಹೆಜ್ಜೆ ಗುರುತುಗಳು ಮೂಡಲು ಆರಂಭವಾಗಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
‘ಸಾಹಿತ್ಯ ಹಾಗೂ ಹೊಸ ತಲೆಮಾರು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಬೆಂಗಳೂರಿನ ಖ್ಯಾತ ವಿಮರ್ಶಕ ಎಸ್.ಆರ್. ವಿಜಯ ಶಂಕರ, ‘ಮಾಹಿತಿ ಎಂಬುದು ಜ್ಞಾನ ಅಲ್ಲ. ನಮ್ಮ ಅನುಭವದ ಮೂಸೆಯಲ್ಲಿ ಬೌದ್ಧಿಕತೆಯೊಂದಿಗೆ ಪರಿವರ್ತನೆ ಆದಾಗ ಕಾವ್ಯ, ಸಾಹಿತ್ಯ ಮೂಡಿ ಬರುತ್ತದೆ. ಹಳೆ ಸಾಹಿತ್ಯದಲ್ಲಿರುವ ಕಥನ ವಿಧಾನ ಹೊಸ ಸಾಹಿತ್ಯದಲ್ಲಿ ಭಾವ ಪ್ರಧಾನವಾಗಿ ಮೂಡಿ ಬಂದಿದೆ. ಭಾವ, ಬುದ್ಧಿಯೊಂದಿಗೆ ಇಂದು ನಾವು ವೈಜ್ಞಾನಿಕ ಸತ್ಯದ ಎದುರು ಕಾವ್ಯದ ಸತ್ಯದ ಸವಾಲನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.
‘ಸಾಹಿತ್ಯ ಮತ್ತು ಸಾಮಾಜಿಕ ಸಂವೇದನೆ’ ಬಗ್ಗೆ ಮಾತನಾಡಿದ ಕಲಬುರ್ಗಿಯ ರಂಜಾನ್ ದರ್ಗಾ, ‘ಮಾನವ ಧರ್ಮವೇ ಶ್ರೇಷ್ಠ ಧರ್ಮವಾಗಿದೆ. ಆದಿ ಕವಿ ಪಂಪ ತನ್ನ ಕೃತಿಗಳಲ್ಲಿ ಸಾಮಾಜಿಕ ಸಂವೇದನೆಯನ್ನು ಪ್ರತಿಪಾದಿಸಿದ್ದಾನೆ. ಯುದ್ಧ ವಿರೋಧಿ, ಹಿಂಸೆ ವಿರೋಧಿ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಗಂಗೆ ಹರಿದು ಬಂದಿದೆ ಎಂದು ಅಭಿಪ್ರಾಯಪಟ್ಟರು.
ಜೀವನ ಮೌಲ್ಯಕ್ಕೆ ವಿನೋದ ಸಾಹಿತ್ಯದ ಕೊಡುಗೆ ಬಗ್ಗೆ ಮಾತನಾಡಿದ ಮಂಗಳೂರಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ. ಭುವನೇಶ್ವರಿ ಹೆಗ್ಡೆ, ‘ಹಾಸ್ಯದಲ್ಲಿ ನಂಬಿಕೆ ಇರುವವರು ಸುಖ ಮತ್ತು ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತಾರೆ ಬದುಕನ್ನು ನಗುನಗುತ್ತಾ ಎದುರಿಸಬೇಕು.
ಆಧ್ಯಾತ್ಮ ಮತ್ತು ಹಾಸ್ಯ ಒಂದೇ ನಾಣ್ಯದ ಎರಡು ಮುಖಗಳು. ಧರ್ಮಸ್ಥಳದ ಸೇವಾ ಕಾರ್ಯಗಳು ಜನರಲ್ಲಿ ಆತ್ಮವಿಶ್ವಾಸ, ಆರ್ಥಿಕ ಸಬಲೀಕರಣ ಮತ್ತು ಮಹಿಳಾ ಸ್ವಾವಲಂಬನೆಯ ಪಾಠ ಕಲಿಸಿದೆ’ ಎಂದರು.
ಹಾಸ್ಯ ಸಾಹಿತ್ಯಕ್ಕೆ ನೀತಿ ಸಂಹಿತೆ ಇರಬೇಕು ಎಂದು ಹೇಳಿದ ಅವರು, ಹಾಸ್ಯ ಸಾಹಿತ್ಯ ರಚನೆಯಲ್ಲಿ ಅಮಾನ ವೀಯತೆ, ವ್ಯಂಗ್ಯ ಸಲ್ಲದು. ಬಡವರು, ಅಂಗವಿಕಲರು, ದೀನದಲಿ ತರನ್ನು ಹಾಸ್ಯಕ್ಕೆ ಒಳಪಡಿಸಿ ಅವಮಾನ ಮಾಡ ಬಾರದು ಎಂದು ಸಲಹೆ ನೀಡಿದರು.
ಕಾರ್ಕಳದ ಪ್ರೊ.ಎಂ. ರಾಮಚಂದ್ರ ನಿರೂಪಿಸಿದರು. ರುಡ್ಸೆಟ್ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಎಂ. ಜನಾರ್ದನ ವಂದಿಸಿದರು. ರಾತ್ರಿ ಲಕ್ಷದೀಪೋತ್ಸವ ನಡೆಯಿತು. ನಾಡಿನೆಲ್ಲೆಡೆಯಿಂದ ಬಂದ ಲಕ್ಷಾಂತರ ಭಕ್ತಾದಿಗಳು ದೀಪೋತ್ಸವನ್ನು ವೀಕ್ಷಿಸಿ ಧನ್ಯತೆಯನ್ನು ಹೊಂದಿದರು.
* *
ಬುದ್ಧಿ ಮತ್ತು ಭಾವಗಳ ವಿದ್ಯುದಾಲಿಂಗನದಿಂದ ಕವಿತೆ ಮೂಡಿ ಬರುತ್ತದೆ. ಕವಿತೆ ರಚನೆಗೆ ಯಾವುದೇ ಸಿದ್ಧ ಸೂತ್ರವಿಲ್ಲ.
ಬಿ.ಆರ್. ಲಕ್ಷ್ಮಣರಾವ್,
ಹಿರಿಯ ಸಾಹಿತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.