ಬಾದಾಮಿ: ಉತ್ತಮ ಮಳೆ ಬಿದ್ದ ಕಾರಣ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನ ಬೆಳೆ ಸಮೃದ್ಧಿಗೆ ಭೂತಾಯಿಗೆ ಹಸಿರು ಸೀರೆ ಉಡಿಸಿದಂತಾಗಿದೆ. ಕಪ್ಪು ಭೂಮಿಯಲ್ಲಿ ಹಸಿರಿನ ಸೌಂದರ್ಯ ಇಮ್ಮಡಿಯಾಗಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ. ಇನ್ನೊಮ್ಮೆ ಅಕಾಲಿಕ ಮಳೆಯಾದರೆ ಬೆಳೆಗೆ ಅನುಕೂಲವಾದೀತು ಎಂಬುದು ರೈತರ ಅಭಿಮತ.
‘ತಾಲ್ಲೂಕಿನಲ್ಲಿ ಹಿಂಗಾರು ಬೆಳೆ ನೀರಾವರಿ ಪ್ರದೇಶದಲ್ಲಿ 4425 ಹೆಕ್ಟೇರ್ ಮತ್ತು ಮಳೆಯಾಶ್ರಿತ 42720 ಹೆಕ್ಟೇರ್ ಕ್ಷೇತ್ರದಲ್ಲಿ ಒಟ್ಟು 47145 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ನೀರಾವರಿ ಪ್ರದೇಶಕ್ಕಿಂತ ಮಳೆಯಾಶ್ರಿತ ಪ್ರದೇಶದಲ್ಲಿ ಅಧಿಕ ಬಿತ್ತನೆಯಾಗಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಚ್. ನರಹಟ್ಟಿ ತಿಳಿಸಿದರು.
‘ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ ಹಿಂಗಾರು ಏಕದಳ ಧಾನ್ಯವಾದ ಬಿಳಿಜೋಳ 27,700 ಹೆಕ್ಟೇರ್, ಮೆಕ್ಕೆಜೋಳ 1600 , ಗೋಧಿ 5720 ಸೇರಿದಂತೆ ಒಟ್ಟು 34,120 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ’ ಎಂದರು.
ಕಡಲೆ ಮತ್ತು ಹುರುಳಿ 9400 ಹೆಕ್ಟೇರ್ , ಎಣ್ಣೆಕಾಳು ಸೂರ್ಯಕಾಂತಿ, ಕುಸುಬೆ ಮತ್ತು ಅಗಸೆ 2900 ಹೆಕ್ಟೇರ್ ಕ್ಷೇತ್ರದಲ್ಲಿ , ನೀರಾವರಿಯಲ್ಲಿ ಹತ್ತಿ ಮತ್ತು ಕಬ್ಬು 375 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ.