ಹುಬ್ಬಳ್ಳಿ: ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತು ಸದ್ಯದಲ್ಲೇ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.ಬೆಳಗಾವಿ ನಗರದ ಸರ್ಕಿಟ್ಹೌಸ್ನಲ್ಲಿ ಗಾಣಿಗ ಸಮಾಜದ ಪ್ರತಿನಿಧಿಗಳಿಂದ ಮನವಿ ಸ್ವಿಕರಿಸಿ ಅವರು ಮಾತನಾಡಿದರು.
ಗಾಣಿಗ ಸಮಾಜ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿಗೆ ಸೂಕ್ತ ಕ್ರಮವಹಿಸಲಾಗುವುದು. ಗಾಣಿಗ ಸಮುದಾಯದವರಿಗೆ ‘2–ಎ’ ಪ್ರಮಾಣಪತ್ರ ನೀಡುವಲ್ಲಿ ವಿಳಂಬವಾಗದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಶಾಸಕ ಸಿದ್ದು ನ್ಯಾಮಗೌಡ ಮಾತನಾಡಿ, ಗಾಣಿಗ ಸಮಾಜದ ಅಭ್ಯರ್ಥಿಗಳಿಗೆ ‘2–ಎ’ ಜಾತಿ ಪ್ರಮಾಣಪತ್ರ ನೀಡಡುವಲ್ಲಿ ಕೆಲ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಗಾಣಿಗ ಸಮಾಜದ ಯುವಕರು ಸರ್ಕಾರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ’ ಎಂದರು.
ಸಿಂದಗಿ ಶಾಸಕ ರಮೇಶ ಬೊಸನೂರ, ಅಖಿಲ ಭಾರತ ಗಾಣಿಗ ಸಮಾಜದ ಉಪಾಧ್ಯಕ್ಷ ಅಶೋಕ ನವಲಗುಂದ, ಮುಖಂಡರಾದ ದಶರಥ ಗಾಣಿಗೇರ, ಜಿ.ಎಸ್.ಛಬ್ಬಿ, ಅಮರಗೊಂಡಪ್ಪ ಮೇಟಿ, ಮಲ್ಲು ಲೋಣಿ, ಪರಶುರಾಮ ಅಳಗವಾಡಿ, ಬಿ.ಸಿ.ಪಾಟೀಲ, ರಮೇಶ ಉಟಗಿ, ಲೀನಾ ಟೋಪನ್ನವರ, ಚಂದ್ರಶೇಖರ ಕಾಖಡಗಿ, ಮೀನಾಕ್ಷಿ ಉಟಗಿ ಇದ್ದರು.