ಕಲಬುರ್ಗಿ: ಕಲಬುರ್ಗಿಯಲ್ಲಿ ಶುಕ್ರವಾರ ಸಿಐಟಿಯು ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಮಟ್ಟದ 7ನೇ ಸಮ್ಮೇಳನ ಆರಂಭವಾಗುತ್ತಿದ್ದಂತೆಯೇ ಸಂಘದ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿಯವರಿಗೆ ಮನವಿಪತ್ರ ಸಲ್ಲಿಸಿದರು.
ವೇತನ ಹೆಚ್ಚಳ, ಕಾಯಂ ಉದ್ಯೋಗ, ಬಡ್ತಿ ಮುಂತಾದ ನೌಕರರ ಬೇಡಿಕೆಗೆ ಪ್ರತಿಕ್ರಿಯಿಸಿದ ಹೆಪ್ಸಿಬಾರಾಣಿ, ‘ಸರ್ಕಾರದ ಮಾರ್ಗದರ್ಶನದಂತೆ ಸಾಮಾಜಿಕ ನ್ಯಾಯ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲರ ಸಂಕಷ್ಟ, ಸಮಸ್ಯೆಗಳ ಅರಿವು ನನಗಿದೆ’ ಎಂದು ಕಾಳಜಿ ತೋರಿದರು.
ಮರುಕ್ಷಣವೇ ಅವರು, ‘ಕೆಲ ಗ್ರಾಮಪಂಚಾಯಿತಿಗಳಲ್ಲಿ ಅಕ್ರಮ ನಡೆದಿರುವುದು ಗಮನಕ್ಕೆ ಬಂದಿದೆ. ಕರ ವಸೂಲಿ ಸರಿಯಾಗಿ ಆಗುತ್ತಿಲ್ಲ. ಗ್ರಾಮ ಸಭೆ ನಡೆಯುತ್ತಿಲ್ಲ’ ಎಂದು ಬೇಸರವನ್ನೂ ವ್ಯಕ್ತಪಡಿಸಿದರು.
ಇದೆಲ್ಲವನ್ನೂ ಆಲಿಸಿ ಭಾಷಣದಲ್ಲಿ ಮೊನಚಾಗಿ ಪ್ರತಿಕ್ರಿಯಿಸಿದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗೌರಮ್ಮ ಪಾಟೀಲ, ‘ಶಾಲು ಹೊದಿಸಿ ಹೊಡೆಯುವುದು ಅಂದ್ರ ಇದೆ ನೋಡ್ರಿ. ನೌಕರರ ಬೇಡಿಕೆ ಈಡೇರಿಸೋಣ, ಸಮಸ್ಯೆ ಬಗೆಹರಿಸೋಣ ಎಂದೆಲ್ಲ ಹೇಳಿ, ಪಂಚಾಯಿತಿಯಲ್ಲಿ ಕೆಲಸ ಆಗ್ತಾ ಇಲ್ಲ ಅಂತಾನೂ ಹೇಳಿದ್ರು’ ಎಂದರು.
ಆದರೆ, ಈ ಮಾತುಗಳನ್ನು ಕೇಳಲು ಅಲ್ಲಿ ಹೆಪ್ಸಿಬಾರಾಣಿ ಕೊರ್ಲಪಾಟಿಯವರು ಇರಲಿಲ್ಲ. ಮನವಿಪತ್ರ ಸ್ವೀಕರಿಸಿ, ಕೆಲ ಹೊತ್ತು ಮಾತನಾಡಿ ಅವರು ಸಮ್ಮೇಳನದಿಂದ ನಿರ್ಗಮಿಸಿದ್ದರು.