ತಿರುವನಂತಪುರ: ಹೈಮಾಸ್ಟ್ ದೀಪ ಅಳವಡಿಕೆ ಸಂಬಂಧ ನಗರಪಾಲಿಕೆಯಲ್ಲಿ ಶನಿವಾರ ನಡೆದ ಚರ್ಚೆಯ ವೇಳೆ, ಸಿಪಿಎಂ ಮತ್ತು ಬಿಜೆಪಿ ಸದಸ್ಯರ ನಡುವೆ ಹೊಡೆದಾಟ ನಡೆದಿದ್ದು, ಮೇಯರ್ ವಿ.ಕೆ.ಪ್ರಶಾಂತ್, ಅವರ ಸಹಾಯಕ ಹಾಗೂ ಪಾಲಿಕೆಯ ನಾಲ್ವರು ಸದಸ್ಯರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೌನ್ಸಿಲ್ ಸಭೆಯಲ್ಲಿ ಗದ್ದಲ ಉಂಟಾಗಿರುವುದು ಸಿ.ಸಿ.ಟಿ.ವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಮೇಯರ್ ಸಭಾಂಗಣದಿಂದ ಹೊರಬಂದು ಮೊದಲ ಮಹಡಿಯಲ್ಲಿದ್ದ ತಮ್ಮ ಕೊಠಡಿಗೆ ತೆರಳುವ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾರೆ. ಇದರಿಂದ ಅವರ ತಲೆಗೆ ಪೆಟ್ಟು ಬಿದ್ದಿದೆ.
‘ಮೇಯರ್ ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಸದಸ್ಯರಾದ ಸಿಪಿಎಂನ ರಜಿಯಾ ಬೇಗಂ, ಸಿಂಧು, ಬಿಜೆಪಿಯ ಬೀನಾ, ಲಕ್ಷ್ಮಿ ಹಾಗೂ ಮೇಯರ್ ಅವರ ಸಹಾಯಕ ಬಿ.ಮೋಹನ್ ಗಾಯಗೊಂಡವರು.