ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ನಿಯೋಗವು ಸಂಗ್ರಹಿಸಿದ 341 ಪುಟಗಳ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗಡಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರಿಗೆ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ಸಲ್ಲಿಸಿದೆ.
‘ಸುಪ್ರೀಂಕೋರ್ಟ್ನಲ್ಲಿ ದಾಖಲಾಗಿ ರುವ ಮಹಾರಾಷ್ಟ್ರದ ಮೂಲ ದಾವೆ (ಸಂಖ್ಯೆ 4/2004) ಕುರಿತಂತೆ ಪ್ರಮುಖ ದಾಖಲೆಗಳು ಪತ್ತೆಯಾಗಿದ್ದು, ಅವು ರಾಜ್ಯದ ಪರ ನಿಲುವಿಗೆ ಪುಷ್ಟಿ ನೀಡುತ್ತವೆ’ ಎಂದು ನಿಯೋಗದಲ್ಲಿದ್ದ ಸದಸ್ಯರು ತಿಳಿಸಿದರು.
‘ಖಾನಾಪುರದ ಮುನ್ಸಿಪ್ ನ್ಯಾಯಾಲಯದಲ್ಲಿ ಅರುಣಕುಮಾರ ದತ್ತಾತ್ರೆಯ ಸರದೇಸಾಯಿ ಎನ್ನುವವರು ರಾಜ್ಯ ಮರುವಿಂಗಡಣಾ ಕಾಯ್ದೆ ಕಲಮು ಗಳನ್ನು ರದ್ದುಪಡಿಸಲು ಕೋರಿ ದಾವೆ (ಸಂಖ್ಯೆ 128/1988) ದಾಖಲಿಸಿದ್ದರು. ಅದರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರವನ್ನು ನಾಲ್ಕನೇ ಪ್ರತಿ ವಾದಿಯನ್ನಾಗಿ ಮಾಡಲಾಗಿತ್ತು.ಈ ಪ್ರಕರಣದಲ್ಲಿ ಹಾಜರಾಗಿದ್ದ ಮಹಾರಾಷ್ಟ್ರ ಸರ್ಕಾರ ತನ್ನ ಕೈಪಿಯತನ್ನು ಸಲ್ಲಿಸಿತ್ತು. ಕೈಪಿಯತ್ತಿನ ಮಜಕೂರಿನ ಪ್ರಕಾರ, ದಿವಾಣಿ ನ್ಯಾಯಾಲಯಕ್ಕೆ ದಾವೆ ಸಲ್ಲಿಸಲು ಬರಲಾರದು ಹಾಗೂ ರಾಜ್ಯ ಪುನರ್ ವಿಂಗಡಣಾ ಕಾಯ್ದೆ ಕಲಮುಗಳು ನ್ಯಾಯಬದ್ಧ ಹಾಗೂ ಕಾಯ್ದೆ ಸಮ್ಮತವಾಗಿವೆ ಎನ್ನುವುದು ಸ್ಪಷ್ಟವಾಗಿದೆ’ ಎಂದರು.
‘ಸಾಂವಿಧಾನಿಕ ಮೌಲ್ಯಗಳುಳ್ಳ ಪ್ರಕರಣಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಮಾತ್ರ ದಾಖಲಿಸಬೇಕು. ರಾಜ್ಯ ಮರು ವಿಂಗಡಣಾ ಕಾಯ್ದೆಗೆ ತಿದ್ದುಪಡಿ ತರಬೇಕಾದರೆ ಸಂಸತ್ತಿನಲ್ಲಿ ಮಾತ್ರ ಸಾಧ್ಯ. ದಿವಾಣಿ ನ್ಯಾಯಾಲಯಕ್ಕೆ ಈ ರೀತಿಯ ದಾವೆ ದಾಖಲಿಸಿಕೊಳ್ಳುವ ಕಾರ್ಯವ್ಯಾಪ್ತಿ ಇಲ್ಲ ಎಂಬುದಾಗಿ 1988ರಲ್ಲೇ ಮಹಾರಾಷ್ಟ್ರ ಸರ್ಕಾರವು ಕೈಫಿಯತನ್ನು ಸಲ್ಲಿಸಿತ್ತು’ ಎಂದು ಹೇಳಿದ್ದಾರೆ.
‘2004ರಲ್ಲಿ ಖಾನಾಪುರದಲ್ಲಿ ಹಾಕಿದ್ದ ದಾವೆ ಹೋಲುವಂತಹ ದಾವೆಯನ್ನು ಆ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಹೂಡಿದೆ. ದಿವಾಣಿ ನ್ಯಾಯಾಲಯಗಳಿಗೆ ವ್ಯಾಪ್ತಿಗೆ ಬರಲಾರದು ಎಂದು ತನ್ನ ಕೈಪಿಯತ್ ನಲ್ಲಿ ಹೇಳಿದ್ದರೂ, ಸುಪ್ರೀಂ ಕೋರ್ಟ್ ನಲ್ಲಿ ಅದೇ ಸ್ವರೂಪದ ದಾವೆ ದಾಖಲಿಸಿದೆ’ ಎಂದು ವಿವರಿಸಿದ್ದಾರೆ.
‘ರಾಜ್ಯ ಪುನರ್ ವಿಂಗಡಣಾ ಕಾಯ್ದೆ ನ್ಯಾಯಬದ್ಧವೆಂದು ಕೈಪಿಯ ತನಲ್ಲಿ ಹೇಳಿತ್ತು. ಈಗ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯ ಕಲಮುಗಳನ್ನು ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಕೋರಿದೆ. ಹೀಗೆ ಮಹಾರಾಷ್ಟ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಈ ದಾಖಲೆ ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳ ಬೇಕು ಎಂದು ಸರ್ಕಾರವನ್ನು ಕೋರಲಾ ಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಗಡಿ ರಕ್ಷಣಾ ಆಯೋಗದೊಂದಿಗೆ ಚರ್ಚಿಸಲು ಪರಿಷತ್ತಿನ ಸದಸ್ಯರೊಂದಿಗೆ ಸಭೆ ಆಯೋಜಿಸಲಾಗುವುದು ಎಂದು ಎಚ್.ಕೆ. ಪಾಟೀಲ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರ ನಿಂ. ತೋಟಿಗೇರ, ಉಪಾಧ್ಯಕ್ಷ ಸುಧೀರ ಅ. ನಿರ್ವಾಣಿ, ಸಹ ಕಾರ್ಯದರ್ಶಿ ಪ್ರಕಾಶ ಚನ್ನಾಳ, ವಕೀಲ ಬಿ. ದಿನಕರ ಶೆಟ್ಟಿ, ಕನ್ನಡ ಹೋರಾಟಗಾರರಾದ ಪ್ರಕಾಶ ಐಹೊಳೆ, ಶಿವಾನಂದ ಎಣಗಿಮಠ ನಿಯೋಗದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.