ಚಿತ್ರದುರ್ಗ: ‘ಐದೇ ತಿಂಗಳಲ್ಲಿ ನಮ್ಮ ಸರ್ಕಾರ ಬರುತ್ತದೆ. ನಮ್ಮ ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುತ್ತೇವೆ. ಮಾತ್ರವಲ್ಲ, ನಾವು ಡೈರಿ ಮೇಂಟೇನ್ ಮಾಡಿದ್ದೀವಿ. ಯಾರು ಕಾಂಗ್ರೆಸ್ ಚೇಲಾಗಳಂತೆ ವರ್ತಿಸುತ್ತಿದ್ದಾರೆಂದು ಗೊತ್ತಿದೆ...’
ಶನಿವಾರ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ‘ಜನಜಾಗೃತಿ ಜಾಥಾ’ದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮತ್ತು ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಪರಿ ಇದು.
ಟಿಪ್ಪು ಜಯಂತಿ ವೇಳೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ 94 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ ಅವರು, ‘ಅದನ್ನು ವಿರೋಧಿಸುವುದಕ್ಕಾಗಿಯೇ ಈ ಸಭೆ ಮಾಡುತ್ತಿದ್ದೇವೆ’ ಎಂದರು.
‘ಪಾಪದ ಕೊಡ ತುಂಬಿದ ಮೇಲೆ ಯಾರೂ ರಕ್ಷಣೆಗೆ ಬರುವುದಿಲ್ಲ. ಹಾಗೆಯೇ ದೌರ್ಜನ್ಯ ಹೆಚ್ಚು ಕಾಲ ಇರುವುದಿಲ್ಲ. ಆ ರೀತಿ ಹೆದರಿಸಬಹುದು ಎಂಬುದು ತಪ್ಪು ಕಲ್ಪನೆ. ನಮ್ಮನ್ನು ಅತಿಯಾಗಿ ಕೆಣಕಬೇಡಿ’ ಎಂದು ಅವರು ಎಚ್ಚರಿಸಿದರು.