ಜಾಲಹಳ್ಳಿ: 'ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸರ್ಕಾರಗಳು ಜಾರಿ ಮಾಡುತ್ತಿರುವ ಉದಾರೀಕರಣ, ಜಾಗತೀಕರಣ ನೀತಿಗಳಿಂದಾಗಿ ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಈ ಆರ್ಥಿಕ ನೀತಿಗಳೇ ರೈತರ ಆತ್ಮಹತ್ಯೆಗೆ ಕಾರಣವಾಗಿದೆ' ಎಂದು ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದ ಸ್ವಾಮಿ ದೂರಿದರು.
ಪಟ್ಟಣದಲ್ಲಿ ಶುಕ್ರವಾರ ಸಿಪಿಎಂ ಪಕ್ಷದ 8ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ಎಡಪಂಥಿಯ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಘಟನೆ ತುಂಬಾ ಕಡಿಮೆ. ಅಲ್ಲಿ ರೈತರ ಬಗ್ಗೆ ತುಂಬಾ ಕಾಳಜಿ ಇರುವುದರಿಂದ ರೈತರ ಎಲ್ಲಾ ರೀತಿಯ ಕೃಷಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಅದರೆ, ಬಲಪಂಥಿಯ ಪಕ್ಷಗಳು ಆಡಳಿತ ನಡೆಸುವ ರಾಜ್ಯಗಳಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ರೈತರ, ಕಾರ್ಮಿಕರ ಬಗ್ಗೆ ಯಾವುದೇ ಕಾಳಜಿ ಇಲ್ಲ’ ಎಂದು ಆರೋಪಿಸಿದರು.
‘ಕಳೆದ ಲೋಕಸಭಾ ಚುನಾವಣೆ ವೇಳೆ ಒಳ್ಳೆಯ ದಿನಗಳ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅವರ ಬಣ್ಣ ಈಗ ಬಯಲಾಗಿದೆ. ಅಧಿಕಾರಕ್ಕೇರಿ 4 ವರ್ಷ ಕಳೆದರೂ ಸಹ ಇಲ್ಲಿಯವರೆಗೆ ಯಾವುದೇ ರೀತಿಯ ಒಳ್ಳೆಯ ಕೆಲಸ ಮಾಡಿಲ್ಲ. ಮೇಕ್-ಇನ್–ಇಂಡಿಯಾ ಹೆಸರಿನಲ್ಲಿ ಭಾರತವನ್ನು ವಿದೇಶಿ ಕಂಪೆನಿಗಳಿಗೆ ಮಾರಲು ಹೊರಟಿದ್ದಾರೆ. ವಿದೇಶಿ ಕಂಪೆನಿಗಳಿಗಾಗಿ ದೇಶದ ಕಾನೂನನ್ನು ಸಡಿಲಗೊಳಿಸಲು ಮುಂದಾಗುತ್ತಿದ್ದಾರೆ’ ಎಂದು ದೂರಿದರು.
‘ರೈತರ ಭೂಮಿಯನ್ನು ಕಿತ್ತುಕೊಂಡು ವಿದೇಶಿ ಕಂಪೆನಿಗಳಿಗೆ ಕೊಡುವ ಮೋದಿ ಸರ್ಕಾರ, ಕಾರ್ಪೊರೇಟ್ ಕಂಪೆನಿಗಳಿಗೆ ರಿಯಾಯಿತಿ ನೀಡಿ, ವಿದೇಶಿ ಕಾರ್ಪೊರೇಟ್ ಕಂಪೆನಿಗಳ ಏಜೆಂಟ್ಗಳಂತೆ ವರ್ತಿಸುತ್ತಿದೆ. ಸ್ವಾತಂತ್ರ್ಯ ನಂತರ ಕಲ್ಯಾಣ ರಾಜ್ಯದ ಕನಸು ಇಟ್ಟುಕೊಂಡು ಸಂವಿಧಾನ ರೂಪಿಸಲಾಗಿತ್ತು. ಆದರೆ, ಅಧಿಕಾರಕ್ಕೆ ಬಂದ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ನಾವು ಹೋರಾಡಬೇಕಿದೆ’ ಎಂದು ಸಲಹೆ ನೀಡಿದರು.
ಪಕ್ಷದ ಮುಖಂಡರಾದ ನರಸಣ್ಣ ನಾಯಕ, ಗಿರಿಯಪ್ಪ ಪೂಜಾರಿ, ಬಸವರಾಜ ತೇಕೂರ್, ಶಬ್ಬೀರ್ ಅಹ್ಮದ್, ಸಂಗಮೇಶ ಮೂಲಿಮನಿ, ಬಸಪ್ಪ ತವಗ, ಅಮರೇಶ ನಾಯಕ, ಲಿಂಗಣ್ಣ ನಾಯಕ ಮಕಾಶಿ, ಮೌನೇಶ ದಾಸರ್, ಶಿವರಾಜ ನಾಯಕ ವಠಾರ್, ಮುದ್ದಪ್ಪ ಬಂಡಿ, ಶೈಲೇಶ್ ಕುಮಾರ, ಬಸವರಾಜ ವಂದಲಿ, ಬುಡನ್ಸಾಬ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.