ಸುರಪುರ (ಯಾದಗಿರಿ ಜಿಲ್ಲೆ): ಕ್ಷುಲ್ಲಕ ಕಾರಣಕ್ಕೆ ಶುಕ್ರವಾರ ಮಧ್ಯರಾತ್ರಿ ನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿದ್ದು, ಪಟ್ಟಣದಲ್ಲಿ ಬಿಗುವಿನ ವಾತಾವರಣವಿದೆ. ಘಟನೆಗೆ ಸಂಬಂಧಿಸಿದಂತೆ 15 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯುವಕನೊಬ್ಬ ಮೊಬೈಲ್ ಕರೆ ಮಾಡಿ ವಿವಾಹಿತೆಯನ್ನು ಛೇಡಿಸಿದ್ದರಿಂದ ಬೆಳಿಗ್ಗೆ ನಗರ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿತ್ತು. ಮಧ್ಯರಾತ್ರಿ ಶಾಸಕ ರಾಜಾ ವೆಂಕಟಪ್ಪನಾಯಕ ಮನೆಯ ಹತ್ತಿರ ಕಾಂಗ್ರೆಸ್ –ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಕಲ್ಲು ತೂರಾಟ ನಡೆಯಿತು.
ಈ ವೇಳೆ ಶಾಸಕ ರಾಜಾ ವೆಂಕಟಪ್ಪ ಅವರ ಮನೆಯ ಮೇಲೂ ಕಲ್ಲು ತೂರಲಾಯಿತು. ಸುದ್ದಿ ತಿಳಿದ ತಕ್ಷಣ ಜಿಲ್ಲಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಶಾಸಕ ಹಾಗೂ ಬಿಜೆಪಿ ಮುಖಂಡ ರಾಜೂಗೌಡ ಅವರ ನಿವಾಸಿಗಳಿಗೆ ಬಿಗಿಭದ್ರತೆ ಒದಗಿಸಿದ್ದಾರೆ.
ಶನಿವಾರ ಸುರಪುರಕ್ಕೆ ಭೇಟಿ ನೀಡಿದ ಐಜಿಪಿ ಅಲೋಕಕುಮಾರ್ ಪರಿಸ್ಥಿತಿ ಅವಲೋಕಿಸಿದರು. ಆಯಕಟ್ಟಿನ ಸ್ಥಳಗಳಲ್ಲಿ ಎರಡು ಕೆ ಎಸ್ ಆರ್ ಪಿ ತಂಡ, ಐದು ಡಿಎಆರ್ ತುಕಡಿಗಳು ಮತ್ತು 300ಕ್ಕೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದ್ದಾರೆ.