ಬೆಂಗಳೂರು: ತಮ್ಮ ಮೇಲೆ ಹಲ್ಲೆ ನಡೆಸಿದ ಎಸಿಪಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದಿಣ್ಣೂರಿನ ‘ಶೆಟ್ಟಿ ಲಂಚ್ ಹೋಮ್’ ಮಾಲೀಕ ರಾಜೀವ್ ಶೆಟ್ಟಿ ಅವರು ಆರ್.ಟಿ.ನಗರ ಠಾಣೆಗೆ ಭಾನುವಾರ ದೂರು ಕೊಟ್ಟಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು, ‘ಪ್ರಕರಣ ಸಂಬಂಧ ಈಗಾಗಲೇ ಡಿಸಿಪಿ ತನಿಖೆ ನಡೆಸುತ್ತಿದ್ದು, ಈ ಹಂತದಲ್ಲಿ ಎಫ್ಐಆರ್ ದಾಖಲಿಸಲು ಬರುವುದಿಲ್ಲ. ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಅವರ ಸೂಚನೆಯಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ರಾಜೀವ್ ಅವರಿಗೆ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ರಾಜೀವ್, ‘ಎಸಿಪಿ ನನ್ನ ಮೇಲೆ ಹಲ್ಲೆ ನಡೆಸಿದ್ದರ ಸಿ.ಸಿ ಟಿ.ವಿ ದೃಶ್ಯದ ಪ್ರತಿಯನ್ನೂ ದೂರಿನ ಜತೆ ಲಗತ್ತಿಸಿದ್ದೇನೆ. ಪೊಲೀಸರು ಎಫ್ಐಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗ ಒಬ್ಬೊಬ್ಬನೇ ಓಡಾಡುವುದಕ್ಕೂ ಭಯ ಶುರುವಾಗಿದೆ ಎಂದು ಹೇಳಿದರು.