ಬೆಂಗಳೂರು: ಶಿವಾನಂದ ವೃತ್ತದ ಬಳಿ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿಯನ್ನು ವಿರೋಧಿಸಿ ಮುಂದಿನ ವಾರ ಮತ್ತೆ ಪ್ರತಿಭಟನೆ ನಡೆಸಲು ಸ್ಥಳೀಯ ನಿವಾಸಿಗಳು ನಿರ್ಧರಿಸಿದ್ದಾರೆ.
ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯ ನೇತೃತ್ವದಲ್ಲಿ ಶ್ರೀಕಾಂತ ಬಡಾವಣೆ ಹಾಗೂ ಮಾಧವ ನಗರದ ನಿವಾಸಿಗಳು ಶಿವಾನಂದ ವೃತ್ತದ ಬಳಿ ಶನಿವಾರ ಸಭೆ ನಡೆಸಿದರು.
‘ಈ ವೃತ್ತದ ಬಳಿ ಸಂಚಾರ ದಟ್ಟಣೆ ಉಂಟಾಗುತ್ತಿಲ್ಲ. ರೈಲ್ವೆ ಕೆಳಸೇತುವೆ ಬಳಿ ಮಾತ್ರ ದಟ್ಟಣೆ ಇರುತ್ತದೆ. ಅಲ್ಲಿನ ಸೇತುವೆಯನ್ನು ವಿಸ್ತರಣೆ ಮಾಡಬೇಕು. ಆದರೆ, ಮೇಲ್ಸೇತುವೆ ಅಗತ್ಯವಿಲ್ಲ’ ಎಂದು ಚಿತ್ರಾ ವೆಂಕಟೇಶ್ ಒತ್ತಾಯಿಸಿದರು.
‘ಉಕ್ಕಿನ ಸೇತುವೆ ಎಂಬ ಕಾರಣಕ್ಕೆ ನಾವು ವಿರೋಧ ಮಾಡುತ್ತಿಲ್ಲ. ಯಾವುದೇ ಸೇತುವೆಯೂ ಇಲ್ಲಿ ಅಗತ್ಯವಿಲ್ಲ’ ಎಂದು ಅವರು ತಿಳಿಸಿದರು.