ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳ ವೇಳೆಯನ್ನು ಬದಲಾಯಿಸಲು ಬಿಸಿಸಿಐ ನಿರ್ಧರಿಸಿದೆ.
ಮಂಜು ಮತ್ತು ಚಳಿ ವಾತಾವರಣದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಧರ್ಮಶಾಲಾ ಮತ್ತು ಮೊಹಾಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಪಂದ್ಯಗಳು ಮಧ್ಯಾಹ್ನ 1.30ರ ಬದಲಿಗೆ ಬೆಳಿಗ್ಗೆ 11.30ಕ್ಕೆ ಆರಂಭವಾಗಲಿವೆ.
‘ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಮತ್ತು ಪಂಜಾಬ್ ಕ್ರಿಕೆಟ್ ಸಂಸ್ಥೆಯ ಪ್ರಮುಖರ ಜೊತೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದರು.
ಧರ್ಮಶಾಲಾದಲ್ಲಿ ಡಿಸೆಂಬರ್ 10ರಂದು ಮತ್ತು ಮೊಹಾಲಿಯಲ್ಲಿ ಡಿಸೆಂಬರ್ 13ರಂದು ಪಂದ್ಯಗಳು ನಡೆಯಲಿವೆ. ಮೂರನೇ ಪಂದ್ಯ ವಿಶಾಖಪಟ್ಟಣದಲ್ಲಿ ಡಿಸೆಂಬರ್ 17ರಂದು 1.30ಕ್ಕೆ ನಡೆಯಲಿದೆ.